ನವದೆಹಲಿ: ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ತೀವ್ರ ಘರ್ಷಣೆಯ ನಂತರ ಚೀನಾ ಬಂಧಿಸಿದ್ದ ಒಬ್ಬರು ಮೇಜರ್ ಸೇರಿದಂತೆ 10 ಭಾರತೀಯ ಯೋಧರನ್ನು ಬಿಡುಗಡೆ ಮಾಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಚೀನಾ ಸೇನೆ ವಿರುದ್ಧದ ಸಂಘರ್ಷದಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆದರೆ ಯಾವುದೇ ಸೈನಿಕರು ನಾಪತ್ತೆಯಾಗಿಲ್ಲ ಎಂದು ಭಾರತೀಯ ಸೇನೆ ಹೇಳಿತ್ತು. ಆದರೆ ಗುರುವಾರ ರಾತ್ರಿ ಬೆಳವಣಿಗೆಯ ಪ್ರಕಾರ ಉಭಯ ದೇಶಗಳ ನಡುವೆ ನಡೆದ ಮಾತುಕತೆಯಿಂದಾಗಿ ಚೀನಾ ಬಂಧಿಸಿದ್ದ ಇಬ್ಬರು ಮೇಜರ್ ಸೇರಿ 10 ಮಂದಿ ಯೋಧರನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ಆದರೆ ಈ ವಿಚಾರವಾಗಿ ಸೇನೆ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ.
ವರದಿಗಳ ಪ್ರಕಾರ, ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನಡುವಿನ ಪ್ರಮುಖ ಸಾಮಾನ್ಯ ಮಟ್ಟದ ಮಾತುಕತೆಯಲ್ಲಿ ಯೋಧರ ಬಿಡುಗಡೆ ಒಪ್ಪಂದಕ್ಕೆ ಬಂದಿದೆ. ಗಲ್ವಾನ್ ಕಣಿವೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸುವ ಬಗ್ಗೆ ಉಭಯ ದೇಶಗಳು ಸತತ ಮೂರನೇ ದಿನ ಮಾತುಕತೆ ನಡೆಸಿವೆ. ಈ ಹಿನ್ನೆಲೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ ಎಂದು ತಿಳಿಸಲಾಗಿದೆ.
ಅಷ್ಟೇ ಅಲ್ಲದೆ ಮತ್ತೊಂದು ವರದಿಯ ಪ್ರಕಾರ ಸೋಮವಾರ ಒಟ್ಟು 76 ಮಂದಿ ಭಾರತೀಯ ಯೋಧರ ಮೇಲೆ ಚೀನಾದ ಸೇನೆಯು ಕ್ರೂರವಾಗಿ ಹಲ್ಲೆ ಮಾಡಿದೆ. ಅದರಲ್ಲಿ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, 58 ಮಂದಿ ಸಣ್ಣಪುಟ್ಟ ಗಾಯಗಳಾಗಿವೆ. ಲೇಹ್ನ ಆಸ್ಪತ್ರೆಯಲ್ಲಿ 18 ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 58 ಜನ ಯೋಧರು ಇತರ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಹೇಳಿತ್ತು.