ಬೆಂಗಳೂರು: ಇದು ಕೊನೆಯ ಲಾಕ್ಡೌನ್. ಇನ್ಮುಂದೆ ರಾಜ್ಯದಲ್ಲಿ ಎಲ್ಲೂ ಲಾಕ್ಡೌನ್ ಮಾಡುವುದಿಲ್ಲ. ಪಾಸಿಟಿವ್ ಬಂದ ಮನೆಯನ್ನು ಮಾತ್ರ ಸೀಲ್ ಡೌನ್ ಮಾಡುತ್ತೇವೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್ ಹೇಳಿದ್ದಾರೆ.
ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯೂ ಇನ್ನು ಮುಂದೆ ಲಾಕ್ಡೌನ್ ಇರುವುದಿಲ್ಲ. ಈಗಾಗಲೇ ಸಿಎಂ ಯಡಿಯೂರಪ್ಪನವರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಪಾಸಿಟಿವ್ ಬಂದ ಮನೆ ಮಾತ್ರ ಸೀಲ್ಡೌನ್ ಮಾಡುತ್ತೇವೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ST Somashekhar Sir ನೇತೃತ್ವದಲ್ಲಿ ಸಭೆ. pic.twitter.com/7JovX9hR8v
— Pratap Simha (@mepratap) July 18, 2020
ಒಟ್ಟಿಗೆ ಎರಡ್ಮೂರು ಮನೆಯವರಿಗೆ ಕೋವಿಡ್ 19 ಪಾಸಿಟಿವ್ ಬಂದರೆ ರಸ್ತೆ ಮಾತ್ರ ಸೀಲ್ಡೌನ್ ಆಗಲಿದೆ. ಅಲ್ಲಿ ಮಾತ್ರ ಸೀಲ್ಡೌನ್ ಇರತ್ತದೆ. ಆದರೆ ಲಾಕ್ಡೌನ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ನಾಲ್ಕೈದು ದಿನದಿಂದ ಕೊರೊನಾ ಹೆಚ್ಚಾಗುತ್ತಿದೆ. ಈ ಸಂಬಂಧ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಮಾಡಿದ್ದೇವೆ. ಮೈಸೂರಿನಲ್ಲಿ ಟಾಸ್ಕ್ ಫೋರ್ಸ್ ತಂಡ ನೇಮಕ ಮಾಡಿ ಅವರ ಸೂಚನೆಯಂತೆ ಕೆಲಸ ಮಾಡಲು ಅಧಿಕಾರಿಗಳು ಇರುತ್ತಾರೆ. ಶಾಸಕ ತನ್ವೀರ್ ಸೇಠ್ಗೆ ಅನಾರೋಗ್ಯ ಇರುವ ಹಿನ್ನೆಲೆಯಲ್ಲಿ ನರಸಿಂಹರಾಜ ಕ್ಷೇತ್ರದಲ್ಲಿ ವಿಶೇಷ ಗಮನ ಹರಿಸಿದ್ದೇವೆ ಎಂದರು.
ನರಸಿಂಹರಾಜ ಕ್ಷೇತ್ರಕ್ಕೆ ಸಂಸದ ಪ್ರತಾಪ್ ಸಿಂಹ ಅವರು ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿದ್ದು ಅವರ ಕೆಳಗೆ ಅಧಿಕಾರಿಗಳ ಕಾರ್ಯಪಡೆ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.
ಎನ್.ಆರ್.ಕ್ಷೇತ್ರದಲ್ಲಿ ಸಾರ್ವಜನಿಕರ ಸಹಕಾರ ನಿರೀಕ್ಷೆ ಮಾಡಿದ್ದೇವೆ. ಒಂದು ವೇಳೆ ಸಹಕಾರ ನೀಡದಿದ್ದರೆ ಪೊಲೀಸರನ್ನು ಬಳಕೆ ಮಾಡಿಕೊಂಡು ನಿಯಂತ್ರಣಕ್ಕೆ ತರುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದರು.
ಸೋಂಕಿತರನ್ನ ಯಾರೂ ಕೂಡಾ ಒಳಗೆ ಬಚ್ಚಿಟ್ಟುಕೊಳ್ಳಬೇಡಿ. ಇದರಿಂದ ನಿಮಗೂ ಅಪಾಯ ಎದುರಾಗಲಿದೆ. ಎಲ್ಲರೂ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕಾರ್ಯಾಚರಣೆ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತಿದ್ದೇವೆ. ಮನವಿಗೆ ಸ್ಪಂದಿಸದೇ ಇದ್ದರೆ ಪೊಲೀಸರ ಮೂಲಕ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.