– ಚೀನಾಗೆ ನಮ್ಮ ಸೈನಿಕರು ತಕ್ಕ ಉತ್ತರ ಕೊಡ್ತಾರೆ
– ಚೀನಾ ಅಧ್ಯಕ್ಷನ ಭಾವಚಿತ್ರ ದಹಿಸಿ ಆಕ್ರೋಶ
ಧಾರವಾಡ: ಚೀನಾದ ಉದ್ಧಟತನದಿಂದ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ನಮ್ಮ ಯೋಧರು 20ಕ್ಕೆ ಡಬಲ್ 43 ಜನರನ್ನು ಹೊಡೆದು ಚೀನಾಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಕಾರ್ಗಿಲ್ ಸ್ತೂಪದ ಬಳಿ ಶ್ರೀರಾಮ ಸೇನೆ ಹಾಗೂ ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿ ಮೌನಾಚರಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಮುತಾಲಿಕ್, ಇದು ಕಾಂಗ್ರೆಸ್, ನೆಹರು, ರಾಹುಲ್ ಸರ್ಕಾರ ಅಲ್ಲ, ನರೇಂದ್ರ ಮೋದಿಯ 56 ಇಂಚಿನ ಛಾತಿ ಇರುವ ಸರ್ಕಾರ. ಚೀನಾ ಏನಾದರೂ ಉದ್ಧಟತನ ತೋರಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗಡಿ ದಾಟಿ ಬರುವ ಪ್ರಯತ್ನ ಮಾಡಿದರೆ ಸೈನಿಕರು ತಕ್ಕ ಉತ್ತರ ಕೊಡುತ್ತಾರೆ. ಕೇಂದ್ರ ಸರ್ಕಾರ ಮತ್ತು ಸೇನೆ ಯುದ್ಧಕ್ಕೆ ಸನ್ನದ್ಧವಾಗಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಚೀನಾ ಅಧ್ಯಕ್ಷನ ಭಾವಚಿತ್ರ ದಹಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾರ್ಗಿಲ್ ಸ್ತೂಪದ ಬಳಿ ಕರವೇ, ಶ್ರೀರಾಮ ಸೇನೆ, ವಿಎಚ್ಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಚೀನಾ ಅಧ್ಯಕ್ಷನ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತ ಪಡಿಸಿದರು. ಚೀನಾ ವಿರುದ್ಧ ಘೋಷಣೆ ಕೂಗಿದರು. ಸುರಿಯುವ ಮಳೆಯಲ್ಲೇ ಪ್ರತಿಭಟಿಸಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.