-ಆತ್ಮಹತ್ಯೆಯೋ? ಕೊಲೆಯೋ?
ಮುಂಬೈ: ನಿಗೂಢವಾಗಿ ಉಳಿದಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಅಸಲಿ ಸತ್ಯ ಇಂದು ಬಹಿರಂಗಗೊಳ್ಳಲಿದೆ. ವೈದ್ಯಕೀಯ ಪರೀಕ್ಷೆ ನಡೆಸಿರುವ ಏಮ್ಸ್ ವೈದ್ಯರ ತಂಡ ಇಂದು ಮಹತ್ವದ ವರದಿ ನೀಡಲಿದ್ದು, ಸುಶಾಂತ್ ಸಾವಿನ ಸೀಕ್ರೆಟ್ ಏನು ಅನ್ನೋದು ಗೊತ್ತಾಗಲಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಗೂಢ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಿಗೂಢ ಸಾವಿನ ತನಿಖೆ ಆರಂಭದ ಬಳಿಕ ಡ್ರಗ್ಸ್ ಮಾಫಿಯಾ, ಅಕ್ರಮ ಹಣ ವರ್ಗಾವಣೆ ಹೀಗೆ ಅನೇಕ ಆಯಾಮಗಳಲ್ಲಿ ಕೇಸ್ ವಿಸ್ತರಿಸುತ್ತಾ ಹೋಗುತ್ತಿದೆ. ಇದರ ಕಾವು ರಾಜ್ಯಕ್ಕೂ ತಟ್ಟಿದೆ. ಸುಶಾಂತ್ ಸಿಂಗ್ ಸಾವಿಗೆ ಆತ್ಮಹತ್ಯೆ ಕಾರಣವೋ ಅಥವಾ ಅವರನ್ನು ಕೊಲೆ ಮಾಡಲಾಗಿದೆಯೇ ಎನ್ನುವ ಬಗ್ಗೆ ಇಂದು ಸ್ಪಷ್ಟ ಮಾಹಿತಿ ತಿಳಿಯಲಿದೆ. ಸುಶಾಂತ್ ಸಿಂಗ್ ನಿಗೂಢ ಸಾವು ಕುರಿತು ಎಲ್ಲ ಆಯಾಮಗಳಿಂದಲೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿರುವ ದೆಹಲಿಯ ಏಮ್ಸ್ ಆಸ್ಪತ್ರೆ ತಜ್ಞರು, ಬಾಲಿವುಡ್ ನಟನ ಸಾವಿನ ಹಿಂದಿನ ಕಾರಣವನ್ನು ಸ್ಪಷ್ಟವಾಗಿ ತಿಳಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಕೊನೆ ಇನ್ಸ್ಟಾ ಪೋಸ್ಟ್ ನಲ್ಲಿ ಅಮ್ಮನ ಬಗ್ಗೆ ಭಾವುಕ ಮಾತು-ಕಣ್ಣೀರು ತರಿಸುತ್ತೆ ಅಮ್ಮ-ಮಗನ ಕಪ್ಪು ಬಿಳುಪು ಫೋಟೋ
ಹಿರಿಯ ವೈದ್ಯ ಡಾ.ಸುಧೀರ್ ಗುಪ್ತ ನೇತೃತ್ವದ ಏಮ್ಸ್ ವೈದ್ಯರ ತಂಡ ಇಂದು ಸಭೆ ಸೇರಲಿದ್ದು, ಸುಶಾಂತ್ ಸಿಂಗ್ ನಿಗೂಢ ಸಾವು ಪ್ರಕರಣದಲ್ಲಿ ಈವರೆಗೆ ನಡೆಸಲಾದ ಮರಣೋತ್ತರ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳ ವರದಿಗಳನ್ನು ಪರಿಶೀಲಿಸಿ ಈ ಬಗ್ಗೆ ಅಂತಿಮ ಅಭಿಪ್ರಾಯ ಪ್ರಕಟಿಸಲಿದ್ದಾರೆ. ಈ ವರದಿ ಇಡೀ ಇಡೀ ತನಿಖೆ ದಿಕ್ಕನ್ನೇ ಬದಲಿಸುವ ಸಾಧ್ಯತೆಗಳಿವೆ. ಇದನ್ನೂ ಓದಿ: ದಿಶಾ ಸಾಲಿಯನ್ ಗೆಳೆಯನಿಗೆ ಭದ್ರತೆ ನೀಡಿ – ಅಮಿತ್ ಶಾಗೆ ನಿತೇಶ್ ರಾಣೆ ಪತ್ರ
ಈ ನಡುವೆ ಸುಶಾಂತ್ ಸಿಂಗ್ ರಜಪೂತ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ದಿಶಾ ಸಾಲಿಯನ್ ಜೂನ್ 8 ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮುಂಬೈನ ಮಲಾಡ್ ಪ್ರದೇಶಲ್ಲಿರುವ ಮನೆಯ 14ನೇ ಮಹಡಿಯಿಂದ ಕಳೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಐದು ದಿನಗಳ ನಂತರ ಜೂನ್ 14ರಂದು ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎರಡು ಸಾವಿಗೂ ಸಂಬಂಧವಿದೆ ಎನ್ನಲಾಗುತ್ತಿದ್ದು ಈ ಆಯಾಮದಲ್ಲಿ ತನಿಖೆ ನಡೆಸುವಂತೆ ಸಿಬಿಐಗೆ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್
ಸದ್ಯ ಪ್ರಕರಣದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಜೈಲು ಸೇರಿದ್ದು ಮಂಗಳವಾರ ಕೋರ್ಟ್ ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ. ಏಮ್ಸ್ ಆಸ್ಪತ್ರೆ ವೈದ್ಯರ ವರದಿ ಈ ಜಾಮೀನು ಅರ್ಜಿ ಮೇಲೂ ಪ್ರಭಾಯ ಬೀರಬಹುದು. ಆದರೆ ಸುಶಾಂತ್ ಸಾವು ಪ್ರಕರಣದಲ್ಲಿ ಡಗ್ಸ್ ಜಾಲದ ನಂಟು ಕೇಳಿ ಬಂದ ನಂತರ ತನಿಖೆಯ ಆಳ ಅಗೆದಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿದ್ದು ಮುಂದೆ ಮತ್ತಷ್ಟು ಆಯಾಮಗಳಲ್ಲಿ ಮಾಹಿತಿ ಹೊರ ಬರಲಿದೆ.