ಇಂದು ಮೊದಲ ಆಷಾಢ ಶುಕ್ರವಾರ – ದೇಗುಲಗಳತ್ತ ಭಕ್ತರ ದಂಡು

Public TV
1 Min Read
annamma temple 3

ಬೆಂಗಳೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಬೆಂಗಳೂರಿನ ದೇವಸ್ಥಾನಗಳತ್ತ ಭಕ್ತ ಸಾಗರವೇ ಹರಿದು ಬರುತ್ತಿದೆ.

ನಗರದ ಪ್ರಮುಖ ದೇವಾಲಯಗಳಾದ ಅಣ್ಣಮ್ಮ ದೇವಸ್ಥಾನ, ಬನಶಂಕರಿ ದೇವಸ್ಥಾನ ಸೇರಿದಂತೆ ಬಹುತೇಕ ಎಲ್ಲಾ ದೇಗುಲಗಳಲ್ಲಿ ಭಕ್ತ ಸಾಗರವನ್ನು ಕಾಣುತ್ತೇವೆ. ಲಾಕ್‍ಡೌನ್‍ನಿಂದಾಗಿ ಸುಮಾರು ಎರಡು ತಿಂಗಳಿಂದ ದೇವರ ದರ್ಶನ ಭಾಗ್ಯ ಇರಲಿಲ್ಲ. ರಾಜ್ಯ ಸರ್ಕಾರ ದೇವಸ್ಥಾನಗಳ ಓಪನ್‍ಗೆ ಅನುಮತಿ ನೀಡಿದೆ. ಈ ಹಿನ್ನೆಲೆ ಹಾಗೂ ಆಷಾಢ ಮಾಸದ ಮೊದಲ ಶುಕ್ರವಾರವಾಗಿರುವುದರಿಂದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.

annamma temple 2 medium

ಬೆಂಗಳೂರಿನ ಪ್ರಸಿದ್ಧ ದೇವಾಲಯ ಅಣ್ಣಮ್ಮ ದೇವಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ತಾಯಿಯ ದರ್ಶನ ಪಡೆದರು. ಜೊತೆಗೆ ವಿಶೇಷ ಪೂಜೆಯನ್ನು ಸಹ ನಡೆಸಲಾಯಿತು. ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಲಕ್ಷ್ಮಣ್ ಸವದಿ ಸಹ ದೇವಿಯ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಸವದಿ, ಆಷಾಢ ಶುಕ್ರವಾರದಂದು ದೇವಿಯ ದರ್ಶನ ಪಡೆಯಲು ಬಂದಿದ್ದೆ. ಈ ವರ್ಷವಾದರೂ ಕೊರೊನಾ ಮಹಾಮಾರಿ ತೊಲಗಲಿ ಎಂದರು.

annamma temple 1 medium

ಆದರೆ ಭಕ್ತಾದಿಗಳಿಗೆ ಬನಶಂಕರಿ ಅಮ್ಮನವರ ದರ್ಶನ ಭಾಗ್ಯ ದೊರೆಯಲಿಲ್ಲ. ಕಳೆದ ಶುಕ್ರವಾರ ಭಕ್ತಾದಿಗಳ ಸಂಖ್ಯೆ ಹೆಚ್ಚಳವಾಗಿದ್ದರಿಂದ, ಆಷಾಢ ಶುಕ್ರವಾರಗಳಲ್ಲಿ ದೇವರ ದರ್ಶನಕ್ಕೆ ಆಡಳಿತ ಮಂಡಳಿ ಬ್ರೇಕ್ ಹಾಕಿತ್ತು. ದೇವಸ್ಥಾನದ ಬೀಗವನ್ನು ಹಾಕಲಾಗಿತ್ತು. ಹೀಗಾಗಿ ದೇವಸ್ಥಾನದ ಗೇಟ್ ಬಳಿಯೇ ನಿಂಬೆಹಣ್ಣಿನ ದೀಪ ಹಾಗೂ ಬೆಲ್ಲದ ದೀಪ ಹಚ್ಚಿ ಭಕ್ತರು ಹರಕೆ ತೀರಿಸಿದರು. ಆಷಾಢ ಶುಕ್ರವಾರ ದೇವರ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಇದನ್ನೂ ಓದಿ: ಬನ್ನೇರುಘಟ್ಟದಿಂದ ಶಿವಮೊಗ್ಗದ ಹುಲಿ ಸಿಂಹಧಾಮಕ್ಕೆ ಆಗಮಿಸಿದ ಹೊಸ ಅತಿಥಿಗಳು

Share This Article
Leave a Comment

Leave a Reply

Your email address will not be published. Required fields are marked *