– ಮತ್ತೆ ಕೊರೊನಾ ಹೆಚ್ಚಳದ ತೀವ್ರ ಆತಂಕ
ಬೆಂಗಳೂರು: ಎರಡು ತಿಂಗಳಿಂದ ಬಂದ್ ಆಗಿದ್ದ ವಿಮಾನ ಸೇವೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇಂದಿನಿಂದ ಆಗಸದಲ್ಲಿ ವಿಮಾನಗಳ ಹಾರಾಟ ಶುರುವಾಗಿಲಿದೆ. ಜೊತೆಗೆ ಕೊರೊನಾ ವೈರಸ್ ಭಯವೂ ಸಹ ಶುರುವಾಗಲಿದೆ.
ಹೌದು. ವಿದೇಶದಿಂದ ಹಿಂದಿರುಗಿ ಬಂದವರಿಂದಲೇ ನಮ್ಮ ದೇಶಕ್ಕೆ ಮಾತ್ರವಲ್ಲ ನಮ್ಮ ರಾಜ್ಯಕ್ಕೂ ಹಾಗೂ ಬೆಂಗಳೂರಿಗೂ ಮೊದಲಿಗೆ ಕೊರೊನಾ ಪಾಸಿಟಿವ್ ಬಂದಿದ್ದು. ಆಗ ಕೊರೊನಾ ಕೇಕೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡಿ ವಿಮಾನ ಸೇವೆಗೆ ಬ್ರೇಕ್ ಹಾಕಿತ್ತು. ಈಗ ದೇಶದಲ್ಲಿ ಮಾತ್ರವಲ್ಲ ನಮ್ಮ ರಾಜ್ಯದಲ್ಲೂ ಕೊರೊನಾ ವೈರಸ್ ರಣಭೀಕರತೆ ಸೃಷ್ಟಿ ಮಾಡಿದೆ.
ಕಳೆದ ವಾರ ಏರ್ ಲಿಫ್ಟ್ ಮೂಲಕ ವಿದೇಶದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯರನ್ನ ಕರೆಸಿಕೊಂಡಿದೆ. ಇದರಲ್ಲಿ ಬೆಂಗಳೂರಿಗೆ ಆಗಮಿಸಿದ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ಈಗ ಇಂದಿನಿಂದ ಡೊಮೆಸ್ಟಿಕ್ ಏರ್ ಲೈನ್ಸ್ ಶುರುವಾಗ್ತಿರೋದು ಬೆಂಗಳೂರಿಗೆ ಕೊರೊನಾ ಕಂಟಕವಾಗೋ ಸಾಧ್ಯತೆಗಳು ದಟ್ಟವಾಗಿದೆ. ಲಾಕ್ ಡೌನ್ ಸಡಿಲಿಕೆ ಮಾಡಿದ್ರಿಂದ ಬೇರೆ ರಾಜ್ಯದಿಂದ ಬಂದವರಿಂದ ಗ್ರೀನ್ ಝೋನ್ ನಲ್ಲಿದ್ದ ಎಷ್ಟೋ ಜಿಲ್ಲೆಗಳಿಗೆ ಕೊರೊನಾ ವ್ಯಾಪಿಸಿರೋದು ನಮ್ಮ ಕಣ್ಮುಂದೆಯೇ ಇದೆ. ಈ ಕೇಸ್ ಗಳ ಸಂಖ್ಯೆ ಇನ್ನೂ ಹೆಚ್ಚಾಗೋ ಸಾಧ್ಯತೆಗಳು ಸಹ ಅಲ್ಲಗೆಳೆಯುವಂತಿಲ್ಲ.
ಈ ಬೆನ್ನಲ್ಲೇ ವಿಮಾನಯಾನ ಶುರುವಾಗ್ತಿರೋದು ಬೆಂಗಳೂರಿಗೆ ಕೊರೊನಾ ವೈರಸ್ ಕೇಕೆ ಹೆಚ್ಚು ಮಾಡೋ ಸಾಧ್ಯತೆಗಳಿವೆ. ಇಂದಿನಿಂದ ಜೂನ್ 30ರವರೆಗೂ ವಿಮಾನಗಳ ಹಾರಾಟಕ್ಕೆ ಮೊದಲ ಹಂತದ ಅನುಮತಿ ನೀಡಲಾಗಿದೆ. ಬೆಂಗಳೂರಿಗೆ ಪ್ರತಿನಿತ್ಯ 215 ವಿಮಾನಗಳು ನಿರ್ಗಮನ ಮತ್ತು ಆಗಮನವಾಗಲಿವೆ. ಪ್ರತಿ 10 ನಿಮಿಷಕ್ಕೆ ಒಂದರಂತೆ ವಿಮಾನಗಳು ಟೆಕ್ ಆಫ್ ಆಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನಕ್ಕೆ ಅನುಗುಣವಾಗಿ ವಿಮಾನಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ.
ವಿಮಾನಯಾನ ಮಾಡೋ ಪ್ರಯಾಣಿಕರಿಗೂ ನಿಯಮಗಳನ್ನ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ವಿಮಾನಗಳ ಹಾರಾಟಕ್ಕೆ, ವಿಮಾನ ಪ್ರಯಾಣಿಕರಿಗೆ ನಿಯಮಗಳೇನು ಗೊತ್ತಾ..?
* ವಿಮಾನಗಳ ಮೂಲಕ ರಾಜ್ಯಕ್ಕೆ ಬರೋರಿಗೆ ಕಡ್ಡಾಯ ಕ್ವಾರಂಟೈನ್.
* ಬೇರೆ ರಾಜ್ಯಗಳಿಂದ ನಮ್ಮ ರಾಜ್ಯದವರು ವಾಪಸಾದರೆ ಕಡ್ಡಾಯ ಕ್ವಾರಂಟೈನ್.
* ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ ರಾಜ್ಯಗಳಿಂದ ಬರೋರಿಗೆ 7 ದಿನ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮತ್ತು 7 ದಿನ ಕಡ್ಡಾಯ ಹೋಂ ಕ್ವಾರಂಟೈನ್.
* ಉಳಿದ ರಾಜ್ಯಗಳಿಂದ ಬರೋರಿಗೆ 14 ದಿನ ಕಡ್ಡಾಯ ಹೋಂ ಕ್ವಾರಂಟೈನ್.
* ಸ್ವತ: ಪ್ರಯಾಣಿಕರೇ ಹೊಟೇಲ್ ವೆಚ್ಚ ಭರಿಸಬೇಕು.
* ಬ್ಯುಸಿನೆಸ್ ಉದ್ದೇಶಕ್ಕೆ ಬರೋರು ಕೊರೊನಾ ನೆಗೆಟಿವ್ ರಿಪೋರ್ಟ್ ಸಲ್ಲಿಸಿದರೆ ಮಾತ್ರ ಪ್ರವೇಶ.
* ಪ್ರಯಾಣಕ್ಕೂ ಎರಡು ದಿನಗಳ ಮುಂಚೆ ರಿಪೋರ್ಟ್ ಸಲ್ಲಿಸಬೇಕು.
* ರಾಜ್ಯದೊಳಗೆ ಯಾರೇ ಬಂದರೂ ಸೇವಾಸಿಂಧು ಮೂಲಕ ಪಡೆದಿರುವ ಇ-ಪಾಸ್ ಸಲ್ಲಿಸತಕ್ಕದ್ದು.
ಇಷ್ಟೇ ಅಲ್ಲದೇ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ರಾಜಸ್ಥಾನಗಳಿಂದ ಬರೋ ಗರ್ಭಿಣಿಯರು, 10 ವರ್ಷ ಕೆಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟ ವೃದ್ಧರು, ಗಂಭೀರ ಕಾಯಿಲೆಯವರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಇರಲಿದೆ. ಈ ವರ್ಗದ ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಇರೋದಿಲ್ಲ. ಆದರೆ ಈ ವರ್ಗದ ಜನ ಹೋಂ ಕ್ವಾರಂಟೈನ್ ನಲ್ಲಿ ತಮ್ಮೊಂದಿಗೆ ಸರಕಾರ ನಿಗದಿ ಪಡಿಸಿದ ಸಹಾಯಕ ಒಬ್ಬರನ್ನು ಜೊತೆಗಿಟ್ಟುಕೊಳ್ಳಬೇಕು. ಈ ಆರು ರಾಜ್ಯಗಳು ಬಿಟ್ಟು ಉಳಿದ ರಾಜ್ಯಗಳಿಂದ ಬರೋ ಎಲ್ಲರಿಗೂ 14 ದಿನ ಹೋಂ ಕ್ವಾರಂಟೈನ್ ಎಂದು ನಿಯಮ ಮಾಡಲಾಗಿದೆ.
ಒಟ್ಟಿನಲ್ಲಿ ಇಂದಿನಿಂದ ವಿಮಾನಯಾನ ಶುರುವಾಗ್ತಿದ್ದು ಬೇರೆ ರಾಜ್ಯದಿಂದ ಬರುವವರು ನಮ್ಮ ರಾಜ್ಯಕ್ಕೆ ಕೊರೊನಾ ತರದೇ ಇದ್ದರೆ ಸಾಕು. ಇಲ್ಲವಾದರೆ ನಮ್ಮ ರಾಜ್ಯವೂ ಸಹ ಡೇಂಜರ್ ಸ್ಟೇಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ.