ಬೆಂಗಳೂರು: ಇಂದಿನಿಂದ ಕಲ್ಯಾಣ ಮಂಟಪ, ಪಾರ್ಟಿ ಹಾಲ್, ರೆಸಾರ್ಟ್ ಗಳಲ್ಲಿ ಮದುವೆ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿಯನ್ನು ಕೊಟ್ಟಿದೆ.
ಸರ್ಕಾರ ಅನುಮತಿ ನೀಡಿದರೂ ಕೆಲವು ಷರತ್ತುಗಳನ್ನು ವಿಧಿಸಿದೆ. ಬಿಬಿಎಂಪಿ ವ್ಯಾಪ್ತಿಯ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುವವರು ಪಾಲಿಕೆ ಜಂಟಿ ಆಯುಕ್ತರ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.
ಜಿಲ್ಲೆಗಳಲ್ಲಿ ಕಲ್ಯಾಣ ಮಂಟಪ ಹಾಗೂ ಪಾರ್ಟಿ ಹಾಲ್ ಗಳಲ್ಲಿ ಮದುವೆ ಮಾಡುವವರು ತಹಶೀಲ್ದಾರ್ ಅವರಿಂದ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಅನುಮತಿ ಪಡೆಯದೇ ಮದುವೆಗೆ ಮುಂದಾದರೆ ಕಲ್ಯಾಣ ಮಂಟಪದ ಮಾಲೀಕರು ಮತ್ತು ಮದುವೆ ಮಾಡುತ್ತಿರುವವರ ವಿರುದ್ಧ ಕಾನೂನಿನ ರೀತಿಯಲ್ಲಿ ಕ್ರಮ ಜರಗಿಸಲಾಗುತ್ತದೆ. ಇದನ್ನೂ ಓದಿ: 79ರ ವ್ಯಕ್ತಿಗೆ 305 ದಿನಗಳ ಕಾಲ ಕೊರೊನಾ, 43 ಬಾರಿ ಪಾಸಿಟಿವ್ – ಇದು ವರ್ಲ್ಡ್ ಲಾಂಗೆಸ್ಟ್ ಕೇಸ್
ಅನುಮತಿ ಪಡೆದು ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುವಾಗ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗರಿಷ್ಠ 40 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಮದುವೆಗೆ ಬರುವವರು ಕಡ್ಡಾಯವಾಗಿ ಕೈಯಲ್ಲಿ ಪಾಸ್ ಹಿಡಿದುಕೊಂಡು ಬರಬೇಕು. ಮದುವೆ ಸಂಭ್ರಮದಲ್ಲಿ ಸರ್ಕಾರ ಹೊರಡಿಸಿರುವ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆಯಂತಹ ಕೊರೊನಾ ನಿಯಮಗಳನ್ನು ಮರೆಯದೇ ಪಾಲನೆ ಮಾಡಬೇಕು. ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಹೆಚ್ಚಿನ ಜನರನ್ನು ಸೇರಿಸಿಕೊಂಡು ಮದುವೆ ಮಾಡಿದರೆ ಅಂತವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
ಸರ್ಕಾರ ಮದುವೆ ಆಯೋಜನೆ ಆಗಿರುವ ಕಲ್ಯಾಣ ಮಂಟಪ, ಪಾರ್ಟಿ ಹಾಲ್, ರೆಸಾರ್ಟ್ ಗಳಲ್ಲಿ ಮಾರ್ಷಲ್ ಗಳನ್ನು ನಿಯೋಜನೆ ಮಾಡಿ ನಿಗಾ ಇಡಲಿದೆ. ಮದುವೆ ಸಂದರ್ಭದಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಆಗುತ್ತಿದೆ ಎನ್ನುವುದು ಮಾರ್ಷಲ್ಗಳಿಗೆ ಖಾತ್ರಿಯಾದರೆ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರಗಿಸುತ್ತಾರೆ.