ಮಂಗಳೂರು: ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆ ವಿದ್ಯತ್ ಸ್ಪರ್ಷಿಸಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಂಬಾರುನಲ್ಲಿ ವಿದ್ಯುತ್ ಲೈನ್ ಸ್ಪರ್ಶದಿಂದಾಗಿ ಕಾಡಾನೆ ಮೃತಪಟ್ಟಿದೆ. ಇಂದು ಬೆಳಗಿನ ಜಾವ ಆಹಾರ ಹುಡುಕಿ ಬಂದ ಸುಮಾರು 35 ರಿಂದ 40 ವರ್ಷದ ಗಂಡು ಕಾಡಾನೆ ಸ್ಥಳದಲ್ಲಿದ್ದ ಈಚಲು ಮರದ ಗರಿ ತಿನ್ನಲು ಯತ್ನಿಸಿದ್ದು, ಈ ಸಮಯದಲ್ಲಿ ಮರ ವಿದ್ಯುತ್ ಲೈನ್ ಗೆ ತಾಗಿ ವಿದ್ಯುತ್ ಸ್ಪರ್ಶ ಆಗಿದೆ. ಹೀಗಾಗಿ ಆನೆ ಅಸುನೀಗಿದೆ.
ಆನೆಯನ್ನು ನೋಡಲು ನೂರಾರು ಜನ ಆಗಮಿಸಿದ್ದು, ದೇವರ ಸಮನವಾದ ಆನೆಯನ್ನು ಮುಟ್ಟಿ ನಮಸ್ಕರಿಸಿದ ದೃಶ್ಯವೂ ಕಂಡು ಬಂತು. ಸ್ಥಳಕ್ಕೆ ವಲಯ ಅರಣ್ಯಧಿಕಾರಿ ರಾಘವೇಂದ್ರ ಸೇರಿದಂತೆ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಕಡಬ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ನಸುಕಿನ ಜಾವ ಘಟನೆ ನಡೆದಿರಬಹುದು ಎನ್ನಲಾಗಿದೆ. ಅರಣ್ಯಗಳ ಬದಿಯಲ್ಲಿ ಕಂದಕಗಳನ್ನು ನಿರ್ಮಿಸಿ, ಕಾಡುಪ್ರಾಣಿಗಳನ್ನು ಹಾಗೂ ಸ್ಥಳೀಯ ಕೃಷಿಕರು ಹಾಗೂ ಗ್ರಾಮಸ್ಥರಿಗೆ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.