ಚಿಕ್ಕೋಡಿ: ಆಹಾರ ಹುಡುಕುತ್ತಾ ಬಂದು ಬಾವಿಯಲ್ಲಿ ಸಿಲುಕಿದ್ದ ಬೃಹತ್ ಆಕಾರದ ಮೊಸಳೆಯನ್ನು ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಕೋಚರಿ ಗ್ರಾಮದ ರೈತ ರಾವಸಾಹೇಬ ಮಗದುಮ್ಮ ಎಂಬುವವರ ಹೊಲದಲ್ಲಿನ ಬಾವಿಯಲ್ಲಿ ಕಳೆದ ಒಂದು ವಾರದ ಹಿಂದೆ ಮೊಸಳೆಯೊಂದು ಬಂದು ಸೇರಿಕೊಂಡಿತ್ತು. ಆಹಾರ ಅರಸಿ ಹಿರಣ್ಯಕೇಶಿ ನದಿಯಿಂದ ಬಂದ ಮೊಸಳೆ ಬಾವಿಯಲ್ಲಿ ಸೇರಿಕೊಂಡಿತ್ತು. ಇದನ್ನ ಕಂಡ ಇಲ್ಲಿನ ರೈತರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು.
ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಯಲ್ಲಿರುವ ಬೃಹತ್ ಗಾತ್ರದ ಮೊಸಳೆಯನ್ನ ಸೆರೆ ಹಿಡಿಯಲು ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಚಾಲಾಕಿ ಮೊಸಳೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆಗೆ ಬೀಳದೆ ತಪ್ಪಿಸಿಕೊಂಡು ಬಾವಿಯಲ್ಲಿ ಅವಿತು ಕುಳಿತಿತ್ತು. ಮೊಸಳೆ ಸೆರೆ ಸಿಗದೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.
ಸತತ ಒಂದು ವಾರಗಳ ಕಾಲ ಕಾರ್ಯಾಚರಣೆ ಬಳಿಕ ಮೊಸಳೆಯನ್ನ ಸೆರೆ ಹಿಡಿದು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಯಶಸ್ವಿಯಾಗಿದ್ದಾರೆ. ಸುಮಾರು 10 ಅಡಿ ಉದ್ದದ ಬೃಹತ್ ಮೊಸಳೆ ಇದಾಗಿದೆ.