ಕಾರವಾರ: ಕಾರವಾರ ನಗರದ ಮೆಡಿಕಲ್ ಕಾಲೇಜಿನ ಕೋವಿಡ್-19 ವಾರ್ಡಿನಿಂದ ತಪ್ಪಿಸಿಕೊಂಡಿದ್ದ ಕೊರೊನಾ ಸೋಂಕಿತ ಕಳ್ಳನನ್ನು ಕೊನೆಗೂ ಪೊಲೀಸರು 2ನೇ ಬಾರಿ ಬಂಧಿಸಿದ್ದಾರೆ.
ಕಾರವಾರ ತಾಲೂಕಿನ ಶಿರವಾಡ ಬಳಿಯ ನಾರಗೇರಿ ಬಳಿ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿರಸಿಯಲ್ಲಿ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕಳ್ಳನೋರ್ವನನ್ನು ಬಂಧಿಸಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಆತನ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ದೃಢಪಟ್ಟಿತ್ತು.
ಕಳ್ಳನನ್ನ ಕೋವಿಡ್-19 ವಾರ್ಡಿಗೆ ದಾಖಲು ಮಾಡಲಾಗಿತ್ತು. ಕಳೆದ ಸೋಮವಾರ ವಾರ್ಡ್ನಲ್ಲಿದ್ದ ಸೋಂಕಿತರ ಇಬ್ಬರ ಮೊಬೈಲ್ ಕದ್ದು ಪರಾರಿಯಾಗಿದ್ದ ಕಳ್ಳನನ್ನು ತಾಲೂಕಿನ ಕದ್ರಾ ಬಳಿ ಬಂಧಿಸಿ ಮತ್ತೆ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ನಿನ್ನೆ ರಾತ್ರಿ ಕಳ್ಳ ಮತ್ತೆ ಬಾಗಿಲು ಮುರಿದು ವಾರ್ಡಿನಿಂದ ತಪ್ಪಿಸಿಕೊಂಡು ನಗರದ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದ. ಇದೀಗ ಪೊಲೀಸರು ಆತನನ್ನು ಬಂಧಿಸಿ ಕಾರವಾರದ ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡಿಗೆ ಮರಳಿ ಕರೆತಂದಿದ್ದು ಹೆಚ್ಚಿನ ನಿಗಾ ವಹಿಸಿದ್ದಾರೆ.