ಹೈದರಾಬಾದ್: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸೋಂಕಿಗೆ ಹೆದರಿ ಆಸ್ಪತ್ರೆಯ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಾಣ ಕಳೆದುಕೊಂಡ ವ್ಯಕ್ತಿಯನ್ನು 77 ವರ್ಷ ಪ್ರಾಯದ ಕೆ ನಾರಾಯಣ್ ಎಂದು ಗುರುತಿಸಲಾಗಿದೆ. ಕೊರೊನಾ ಚಿಕಿತ್ಸೆಗೆಂದು ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮಹಡಿಯ ಮೇಲಿನಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ.
ಮೂಲತಃ ವೆಮುಲವಾಡದವರಾದ ಕೆ ನಾರಾಯಣ್ ಕೊಂಡಾಪುರ್ನಲ್ಲಿ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದರು. ಮಾಹಿತಿ ಪ್ರಕಾರ ಅವರು ಮಾನಸಿಕ ಅಸ್ವಸ್ಥರಾಗಿದ್ದರು ಎಂದು ವರದಿಯಾಗಿದೆ.
ಆಸ್ಪತ್ರೆಯ ವೈದ್ಯರು ಕೊಟ್ಟಿರುವ ವರದಿ ಪ್ರಕಾರ ನಾರಾಯಣ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಜನವರಿ 13ರಂದು ಕೊಂಡಾಪುರ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ನರ್ಸ್ಗಳಿಂದ ಚಿಕಿತ್ಸೆ ಪೆಡೆಯುತ್ತಿದ್ದ ವೇಳೆ ಆಸ್ಪತ್ರೆಯ 2ನೇ ಮಹಡಿಯ ಮೇಲಿಂದ ಹಾರಿದ್ದಾರೆ. ಇದನ್ನು ಗಮನಿಸಿ ಆಸ್ಪತ್ರೆ ಸಿಬ್ಬಂದಿ ತಕ್ಷಣ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕಕ್ಕೆ ದಾಖಲಿಸಿದ್ದಾರೆ ಆದರೆ ಅಷ್ಟೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೊಗಿತ್ತು.
ನಂತರ ಮನೆಯವರೊಂದಿಗೆ ವಿಚಾರ ತಿಳಿಸಿ ಅವರಿಗೆ ಶವವನ್ನು ಹಸ್ತಾಂತರಿಸಲಾಯಿತು. ಈ ಹಿಂದೆ 60ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಇದೇ ರೀತಿ ಕೊರೊನಾಗೆ ಹೆದರಿ ಖಾಸಗಿ ಆಸ್ಪತ್ರೆಯ ಮೇಲಿಂದ ಹಾರಿ ಪ್ರಾಣಕಳೆದುಕೊಂಡಿದ್ದ ಘಟನೆ ಹೈದರಾಬಾದ್ನಲ್ಲಿ ವರದಿಯಾಗಿತ್ತು.