– ಅಂತ್ಯಕ್ರಿಯೆ ನಂತ್ರ ಹೇಳಿದ್ರು ಅದು ಬೇರೊಬ್ಬರ ಶವ ನಿಮ್ಮದಲ್ಲ
– ಪ್ಯಾಕ್ ಮಾಡಿದ ರೀತಿಯಲ್ಲಿ ಕುಟುಂಬಸ್ಥರಿಂದ ಅಂತ್ಯಕ್ರಿಯೆ
ಚಿಕ್ಕೋಡಿ: ಕೊರೊನಾ ಮಹಾಮಾರಿಯಿಂದ ಈಗಾಗಲೇ ಜನರು ಭಯಭೀತರಾಗಿದ್ದು ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಸಾಯುತ್ತಲೆ ಇದ್ದಾರೆ. ಕೋವಿಡ್ ರೋಗಿ ಜೀವಂತವಿದ್ದರೂ, ರೋಗಿ ಸಾವನ್ನಪ್ಪಿದ್ದಾನೆ ಎಂದು ಹೇಳಿ ಶವ ಪ್ಯಾಕ್ ಮಾಡಿ ಮನೆಗೆ ಕಳಿಸಿರುವ ಘಟನೆಯೊಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ.
ಮೋಳೆ ಗ್ರಾಮದ ಪಾಯಪ್ಪ ಸತ್ಯಪ್ಪ ಹಳ್ಳೊಳ್ಳಿ (82) ಎಂವವರು ಮೇ 01 ರಂದು ಬೆಳಗಾವಿಯ ವೆನಿಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದರು. ಮೇ 2 ರಂದು ಬೆಳಗ್ಗೆ ಮೃತರಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಮೃತ ದೇಹವನ್ನು ಪ್ಯಾಕ್ ಮಾಡಿ ಗ್ರಾಮಕ್ಕೆ ಕಳುಹಿಸಿದ್ದರು.
ಪಾಯಪ್ಪ ಅವರಿಗೆ ಕೊರೊನಾ ಧೃಡ ಹಿನ್ನೆಲೆಯಲ್ಲಿ ಮನೆಯವರು ಮೃತನ ಮುಖ ನೋಡದೆ ಜಮೀನಿನಲ್ಲಿ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದರು. ಇದಾದ ಬಳಿಕ ಬೆಳಗಾವಿ ವೆನಿಸ್ ಆಸ್ಪತ್ರೆ ಸಿಬ್ಬಂದಿ ಪಾಯಪ್ಪ ಅವರ ಮನೆಗೆ ಕರೆ ಮಾಡಿ ನಿಮ್ಮ ತಂದೆ ಅವರು ಸಾವನ್ನಪಿಲ್ಲ. ಅವರು ಆಸ್ಪತ್ರೆಯಲ್ಲಿ ಆರಾಮಾಗಿದ್ದಾರೆ ಎಂದು ಹೇಳುವಷ್ಟರಲ್ಲಿ ಬದಲಾವಣೆಯಾಗುರುವ ಮೃತದೇಹದ ಅಂತ್ಯಕ್ರಿಯೆ ಮುಗಿದಿತ್ತು.
ಮೃತನಾಗಿರುವ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ಮಾಯಪ್ಪ ಮಾವರಕರ (71) ಅವರ ಮೃತದೇಹವನ್ನು ಮೋಳೆ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ವಿಷಯ ತಿಳಿದ ವೆನಿಸ್ ಆಸ್ಪತ್ರೆ ಸಿಬ್ಬಂದಿ ಮೇ 02 ರಂದು ಮೋಳೆ ಗ್ರಾಮಕ್ಕೆ ಆಗಮಿಸಿ ನಮಗೆ ಮಾಯಪ್ಪ ಅವರ ಶವ ನೀಡಿ ಎಂದು ಕೇಳಿದ್ದಾರೆ. ಆದರೆ ಸ್ಥಳೀಯರು ನಿರಾಕರಿಸಿದ್ದು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹೇಳಿದರೆ ಶವ ಕೊಡಲು ಸಿದ್ಧ ಎಂದು ಹೇಳಿದ್ದಾರೆ.
ಮೇ.02 ರಂದು ಶವ ಸಿಗದ ಹಿನ್ನೆಲೆಯಲ್ಲಿ ಇಂದು ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಹಾಗೂ ಕಾಗವಾಡ ಪಿಐ ಹಣಮಂತ್ ಧರ್ಮಟ್ಟಿ ಮತ್ತು ಉಪತಹಶೀಲ್ದಾರ್ ಅಣ್ಣಪ್ಪ ಕೋರೆ ಅವರ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಾಯಪ್ಪ ಮಾವರಕರ ಅವರ ಮೃತ ದೇಹವನ್ನು ಹಸ್ತಾಂತರಿಸಲಾಯಿತು.
ವೈದ್ಯರನ್ನು ದೇವರೆಂದು ಪೂಜಿಸುತ್ತಾರೆ. ಆದರೆ ವೈದ್ಯರ ಈ ಒಂದು ಸಣ್ಣ ತಪ್ಪಿನಿಂದ ಸಾಯದೇ ಇರುವವರ ಮನೆಗೆ ಮೃತ ದೇಹ ಕಳಿಸಿದ್ದರಿಂದ ಪಾಯಪ್ಪ ಅವರ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ವೆನಿಸ್ ಆಸ್ಪತ್ರೆ ವಿರುದ್ಧ ಮೋಳೆ ಗ್ರಾಮದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.