ಬೆಂಗಳೂರು: ನಟಿ ಮೇಘನಾ ಸರ್ಜಾ ಇಂದು ಬೆಳಗ್ಗೆ ಬೆಂಗಳೂರಿನ ಕೆ.ಆರ್.ರಸ್ತೆಯ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮೇಘನಾರಿಗಾಗಿ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ. ಮೇಘನಾ ಅವರಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ವಾರ್ಡ್ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ನಾಳೆ ಮೇಘನಾ ಸರ್ಜಾರಿಗೆ ಡೆಲಿಬರಿ ಆಗುವ ಸಾಧ್ಯತೆಗಳಿವೆ. ಹಾಗಾಗಿ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಮೇಘನಾ ಅವರು ದಾಖಲಾಗುವ ವಾರ್ಡಿನಲ್ಲಿ ಫೋಟೋಗಳನ್ನ ಹಾಕಿಸಿದ್ದಾರೆ. ಮದುವೆಯಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ತೆಗೆಸಿಕೊಂಡಿರುವ ಒಂದು ಫೋಟೋ ಸಹ ಇದೆ.
ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಮೇಘನಾ ಸರ್ಜಾ, ಖಂಡಿತವಾಗಿ ಚಿರು ಮತ್ತೆ ಮಗುವಿನ ರೂಪದಲ್ಲಿ ಜನ್ಮ ತಾಳುತ್ತಾರೆ. ಆದರೆ ತಾನು ಯಾವಾಗ ಭೂಮಿಗೆ ಬರಬೇಕು ಎಂದು ಚಿರು ಅವರೇ ಇಚ್ಛಿಸಬೇಕು. ನಾನೇನೂ ಹೇಳಕ್ಕಾಗಲ್ಲ ಎಂದರು. ಚಿರು ಜನ್ಮದಿನದಂದ್ಲೇ ಭೂಮಿಗೆ ಬರಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ, ಆದರೂ ಆಗಬಹುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.
ಅವಳಿ ಮಕ್ಕಳಾಗುತ್ತವೆ ಎಂಬ ಸುದ್ದಿ ಇದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮೇಘನಾ, ನೋಡೋಣ.. ಆದರೂ ಆಗಬಹುದು ಎಂದು ನಕ್ಕರು. ಚಿರು ಕನಸಿನಂತೆ ಸೀಮಂತ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ, ಚಿರು ಅವರ ಕನಸಿನಂತೆ ಧ್ರುವ ಹಾಗೂ ನಮ್ಮ ತಂದೆ-ತಾಯಿ ಒಟ್ಟಾರೆ ನಮ್ಮ ಕುಟುಂಬ ಅದನ್ನು ನನಸು ಮಾಡಿದೆ. ನನಗೆ ತುಂಬಾ ಖುಷಿಯಾಗಿದೆ. ಈ ಬಗ್ಗೆ ಚಿರುಗಂತೂ ಸಿಕ್ಕಾಪಟ್ಟೆನೆ ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.