ಬೆಳಗಾವಿ: ಆಸ್ತಿಗಾಗಿ ಅಣ್ಣ- ತಮ್ಮಂದಿರು ಕಿತ್ತಾಡಿಕೊಂಡಿರುವುದು, ಬಡಿದಾಡಿಕೊಂಡಿರುವುದನ್ನು ನೋಡಿದ್ದೇವೆ. ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿ ವಿವಾದವನ್ನು ಬಗೆಹರಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಆಸ್ತಿ ವಿವಾದದ ವಿಚಾರದಲ್ಲಿ ಇಲ್ಲೋರ್ವ ಪಾಪಿ ಮುಗ್ಧ ಕಂದಮ್ಮನನ್ನು ಬಲಿ ಪಡೆದುಕೊಂಡಿದ್ದಾನೆ.
ಆಸ್ತಿ ವಿವಾದದ ಹಿನ್ನೆಲೆ ನಾಲ್ಕು ವರ್ಷದ ಬಾಲಕನನ್ನು ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ಜರಗಿದೆ. ಕೊಲೆಯಾದ ಮಗುವನ್ನು ವಿರೇಶ ಸಂಕಣ್ಣ(4) ಎಂದು ಗುರುತಿಸಲಾಗಿದೆ. ಈ ಮುಗ್ಧ ಕಂದಮ್ಮನನ್ನು ಈರಪ್ಪ ಬಸಪ್ಪ ಸಂಕಣ್ಣ ಎಂಬವನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುರಗೋಡ ಠಾಣೆಯ ಪೊಲೀಸರು, ಆಸ್ತಿ ವಿವಾದದಿಂದಲೇ ಆರೋಪಿ ಈರಪ್ಪ ಬಸಣ್ಣ ಮಗುವನ್ನು ಹತ್ಯೆಗೈದಿದ್ದಾನೆ ಎಂದು ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಲು ಆರಂಭಿಸಿದ್ದಾರೆ.