ನೆಲಮಂಗಲ: ಕೊರೊನಾ ನಿಯಂತ್ರಣಕ್ಕಾಗಿ ಜನರು ಮುಖಕ್ಕೆ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈಗಳಿಗೆ ಸ್ಯಾನಿಟೈಸರ್ ಹಾಕೊಳ್ಳಿ ಅನ್ನೋದು ಇವತ್ತು ನಾವು ಕೇಳೋ ಸಾಮಾನ್ಯ ಮಾತುಗಳು. ಆದರೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಬ್ಯಾಂಕ್ ಸಿಬ್ಬಂದಿ, ಅವರಣಕ್ಕೆ ಮಾಸ್ಕ್ ಹಾಕುವ ರೀತಿಯಲ್ಲಿ ಪ್ಲಾಸ್ಟಿಕ್ ಕವರ್ ಸುತ್ತಿದ್ದಾರೆ.
ಆವರಣಕ್ಕೆ ಪ್ಲಾಸ್ಟಿಕ್ ಕವರ್ ಸುತ್ತುವ ಮೂಲಕ ಗ್ರಾಹಕರಿಗೂ ಮತ್ತು ಬ್ಯಾಂಕ್ ಸಿಬ್ಬಂದಿಗೆ ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಿದ್ದಾರೆ. ನೆಲಮಂಗಲ ತಾಲೂಕಿನ ಕುಲವನಹಳ್ಳಿ ಕೆನರಾ ಬ್ಯಾಂಕ್ ಶಾಖೆ ಕೊರೊನಾ ರೋಗ ನಿಯಂತ್ರಣಕ್ಕೆ ವಿಶೇಷವಾದ ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಂಡಿರುವುದು ಎಲ್ಲರ ಗಮನ ಸೆಳೆದಿದೆ.
ಎಲ್ಲಾ ಬ್ಯಾಂಕ್ ಗಳಂತೆಯೂ ಇಲ್ಲಿಯೂ ಉಷ್ಣಾಂಶ ಪತ್ತೆ ಮಾಡುವುದು, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳವುದಕ್ಕೆ ಕ್ರಮ ತೆಗೆಕೊಳ್ಳಲಾಗಿದೆ. ಅದರ ಹೊರತಾಗಿಯೂ ಬ್ಯಾಂಕ್ ವ್ಯವಸ್ಥಾಪಕರ ಕೊಠಡಿ ಸೇರಿದಂತೆ ಬ್ಯಾಂಕ್ ಕೌಂಟರ್ ಗಳನ್ನ ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಲಾಗಿದೆ.
ಬ್ಯಾಂಕ್ ಸಿಬ್ಬಂದಿ ಜೊತೆ ಗ್ರಾಹಕರು ವ್ಯವಹರಿಸಲು ಅನುಕೂಲವಾಗಲೆಂದು ಪ್ಲಾಸ್ಟಿಕ್ ಕವರ್ ನಲ್ಲಿ ಕಿಂಡಿಗಳನ್ನ ಮಾಡಲಾಗಿದೆ. ಗ್ರಾಹಕರಿಂದ ಸಿಬ್ಬಂದಿಗೆ ಕೊರೊನಾ ವೈರಸ್ ಹರಡದಂತೆ ಬ್ಯಾಂಕ್ ಸಿಬ್ಬಂದಿ ತೆಗೆದುಕೊಂಡಿರುವ ವಿನೂತನ ಮುನ್ನೆಚ್ಚರಿಕೆ ಕ್ರಮ ಜನರ ಗಮನ ಸೆಳೆದಿದೆ.