ಶಿವಮೊಗ್ಗ: ಭದ್ರಾವತಿಯಲ್ಲಿ ಆರ್ಎಎಫ್(ರ್ಯಾಪಿಡ್ ಆಕ್ಷನ್ ಫೋರ್ಸ್) ಘಟಕ ಸ್ಥಾಪನೆಯಿಂದಾಗಿ ನಕ್ಸಲ್ ಚಟುವಟಿಕೆ ನಿಗ್ರಹ, ರಕ್ಷಣಾ ಕಾರ್ಯ ಸೇರಿದಂತೆ ದಕ್ಷಿಣ ಭಾರತದಲ್ಲಿ ಶಾಂತಿ ನೆಲೆಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಜಿಲ್ಲೆಯ ಭದ್ರಾವತಿ ತಾಲೂಕಿನ ಬುಳ್ಳಾಪುರದ ಡಿಎಆರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಎಎಫ್ ಘಟಕದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ಆರ್ಎಎಫ್ ಘಟಕ ಸ್ಥಾಪನೆಯಿಂದ ಇಡೀ ದಕ್ಷಿಣ ಭಾರತದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುತ್ತದೆ. ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಭೂಮಿ ನೀಡಿದ ರಾಜ್ಯ ಸರ್ಕಾರಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಸಿಆರ್ಪಿಎಫ್ ವಿಶೇಷ ಭಾಗವಾಗಿರುವ ಆರ್ಎಎಫ್ ಅವಘಡ, ದಂಗೆ ನಿಗ್ರಹಕ್ಕೆ ಆರ್ಎಎಫ್ ಸಹಕಾರಿಯಾಗಲಿದೆ. ಅಲ್ಲದೆ ಯಾವುದೇ ಬೃಹತ್ ಸಮಾರಂಭಗಳು ನಡೆದರೂ ಆರ್ಎಎಫ್ ಸಿಬ್ಬಂದಿ ತಯಾರಿರುತ್ತಾರೆ. ಹೀಗಾಗಿ ಸಂಪೂರ್ಣ ಭದ್ರತೆ ಸಿಗಲಿದೆ. ಕೇವಲ ಭದ್ರತೆ ಮಾತ್ರವಲ್ಲ ಚಂಡಮಾರುತ, ಅತೀವೃಷ್ಟಿ ಸೇರಿದಂತೆ ಯಾವುದೇ ನೈಸರ್ಗಿಕ ವಿಕೋಪಗಳು ಸಂಭವಿಸಿದಲ್ಲಿ ರಕ್ಷಣಾ ಕಾರ್ಯ ನಡೆಸಲಿದೆ. ಹೀಗಾಗಿ ಆರ್ಎಎಫ್ ನಮ್ಮ ಅತೀ ದೊಡ್ಡ ಬಲವಾಗಿದೆ. ಸರ್ದಾರ್ ವಲ್ಲಭಾಯ್ ಪಟೇಲ್ ಅವರು ಇದನ್ನು ಸ್ಥಾಪಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ವಾತಂತ್ರ್ಯದ ಬಳಿಕ ಇಂದಿನ ವರೆಗೆ ದೇಶದ ಯಾವುದೇ ಭಾಗದಲ್ಲಿ ಗಲಭೆ, ನಕ್ಸಲರು, ಮಾವೋವಾದಿಗಳು ಹಾಗೂ ಅಹಿತಕರ ಘಟನೆಗಳು ನಡೆದರೂ ಸುರಕ್ಷತೆ ನೀಡಲು ಈ ಯೋಧರು ಶ್ರಮಿಸುತ್ತಾರೆ. ಚಂಡಮಾರುತ ಹಾಗೂ ಇತರೆ ಯಾವುದೇ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯವನ್ನು ಸಹ ಯೋಧರು ಮಾಡುತ್ತಿದ್ದಾರೆ. ಹೀಗೆ ಎಲ್ಲ ರೀತಿಯ ಭದ್ರತೆ, ಸುರಕ್ಷತೆ ಹಾಗೂ ರಕ್ಷಣೆಯನ್ನು ನೀಡುತ್ತಿದ್ದಾರೆ ಎಂದರು.
ಭದ್ರಾವತಿಯಲ್ಲಿ ಸ್ಥಾಪಿತವಾಗಿರುವ ಆರ್ಎಎಫ್ ಘಟಕದ ಮೂಲಕ ಸಹ ಕೇವಲ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲ ಜನರನ್ನು ಜೋಡಿಸುವ ಕೆಲಸವನ್ನು ಸಹ ಮಾಡುತ್ತಾರೆ. ಯುವಕರಿಗೆ ವಿಶೇಷ ತರಬೇತಿ ಜೀಡಲು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ. ಕರ್ನಾಟಕದಲ್ಲಿ ಸಹ ಇದರ ಅಫೀಲಿಯೆಟೆಡ್ ಕಾಲೇಜನ್ನು ತೆರೆಯಲು ಚಿಂತಿಸಲಾಗುತ್ತಿದೆ. ಈ ಮೂಲಕ ಕರ್ನಾಟಕದ ವಿದ್ಯಾರ್ಥಿಗಳಿಗೂ ಫೋರೆನ್ಸಿಕ್ ಸೈನ್ಸ್ ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಅಡಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕೊರೊನಾ ವಿರುದ್ಧ ಭಾರತ ಅತೀ ಹೆಚ್ಚು ಹೋರಾಟ ನಡೆಸಿದೆ. ಕೊರೊನಾ ಆರಂಭದಲ್ಲಿ ನಮ್ಮಲ್ಲಿ ಕೇವಲ ಒಂದೇ ಪ್ರಯೋಗಾಲಯವಿತ್ತು. ಕೊರೊನಾ ನಿಭಾಯಿಸಲು ಹೆಚ್ಚು ಮೂಲಭೂತ ಸೌಕರ್ಯಗಳು ಇರಲಿಲ್ಲ. ಆದರೂ ಸಮರ್ಥವಾಗಿ ಕೆಲಸ ಮಾಡಲಾಗಿದೆ. ಇದೀಗ ಅತೀ ಹೆಚ್ಚಿನ ಪ್ರಯೋಗಾಲಯಗಳನ್ನು ಇಂದು ನಮ್ಮ ದೇಶ ಹೊಂದಿದೆ. ಕೊರೊನಾ ವಿರುದ್ಧ ಜಗತ್ತಿನ ಎಲ್ಲ ದೇಶದ ಸರ್ಕಾರಗಳು ಹೋರಾಡಿವೆ. ಆದರೆ ನಮ್ಮ ದೇಶದದಲ್ಲಿ ಸರ್ಕಾರ ಜೊತೆ ಜನರು ಸಹ ಕೈ ಜೋಡಿಸಿ ಹೋರಾಟ ನಡೆಸಿದರು ಎಂದರು.
ಕೊರೊನಾ ವಿರುದ್ಧ ಹೋರಾಡಿದ ಆರೋಗ್ಯ ಸಿಬ್ಬಂದಿ ತ್ಯಾಗ ದೊಡ್ಡದು. ಹೀಗಾಗಿ ಆರಂಭದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ, ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲು ನಿರ್ಧರಿಸಿದೆವು. ಇಷ್ಟಾದರೂ ಕೊರೊನಾ ನಿರ್ವಹಣೆ ಬಗ್ಗೆ ಹಾಗೂ ನಮ್ಮ ಈ ನಿರ್ಧಾರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಅದರೆ ನಮಗೆ ಹೆಮ್ಮೆಯಿದೆ, ಇಂದು ಎರಡು ಲಸಿಕೆಗಳನ್ನು ಪಡೆಯುವಲ್ಲಿ ನಾವು ಇದೀಗ ಯಶಸ್ವಿಯಾಗಿದ್ದೇವೆ. ಇಂದಿನಿಂದ ಲಸಿಕೆ ವಿತರಣೆ ಆರಂಭವಾಗಿದೆ. ಕೊರೊನಾ ಗೆಲ್ಲುವ ಭರವಸೆ ಇನ್ನೂ ಹೆಚ್ಚಿದೆ ಎಂದು ತಿಳಿಸಿದರು.