ಬೆಂಗಳೂರು: ಆರ್.ಆರ್ ನಗರ ಕ್ಷೇತ್ರದ ಚುನಾವಣೆ ಪ್ರಚಾರ ಬಿರುಸುಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಪರ ಸಚಿವ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್, ಆರ್ಆರ್ ನಗರದ ಜನರಿಗೆ ದೊಡ್ಡ ಬಂಡೆ, ಚಿಕ್ಕ ಬಂಡೆ ಏನೂ ಕೊಟ್ಟಿಲ್ಲ ಎಂದು ಟೀಕೆ ಮಾಡಿದರು.
ಪ್ರಚಾರದಲ್ಲಿ ಮಾತನಾಡಿದ ಅಶೋಕ್ ಅವರು, ಮುನಿರತ್ನ ಅವರು ಇದೇ ಊರು. ಡಿಕೆ ಶಿವಕುಮಾರ್ ನೂರು ಕಿ.ಮೀ ದೂರದ ಊರಿನವರು. ಇವರ ಯೋಗ್ಯತೆಗೆ ನಿಮಗೆ ರೇಷನ್ ಕೊಡಲಿಲ್ಲ. ಆರ್ ಆರ್ ನಗರದ ಜನರಿಗೆ ದೊಡ್ಡ ಬಂಡೆ ಮತ್ತು ಚಿಕ್ಕ ಬಂಡೆ ಏನೂ ಕೊಟ್ಟಿಲ್ಲ. ಆದರೆ ನಿಮ್ಮ ಕಷ್ಟಕ್ಕೆ ಆಗುವುದು ಮುನಿರತ್ನ ಮಾತ್ರ ಎಂದು ಜನರ ಬಳಿ ಮತಯಾಚನೆ ಮಾಡಿದರು.
ವಿಧಾನಸೌಧದ ಮೆಟ್ಟಿಲಿಗೆ ಕಲ್ಲಾಗುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ ಅದರ ಅವಶ್ಯಕತೆ ಇಲ್ಲ. ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧಕ್ಕೆ ಬೇಕಾದಷ್ಟು ಕಲ್ಲು ಹಾಕಿ ಕಟ್ಟಿದ್ದಾರೆ. ಇನ್ನೂ ಹದಿನೈದು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ. ಕುಮಾರಸ್ವಾಮಿ ಡಿಕೆಶಿ ಜೋಡೆತ್ತು ಅನ್ನುತ್ತಿದ್ದರು. ಈಗ ಆ ಜೋಡೆತ್ತು ಕುಂಟೆತ್ತು ಆಗಿದೆ. ಕೊಂಬು ಮುರಿದು ಹೋಗಿದೆ. ಕುರುಕ್ಷೇತ್ರದ ನಿಜವಾದ ಹೀರೊ ಮುನಿರತ್ನ. ರಾಜ್ಯಕ್ಕೆ ಯಡಿಯೂರಪ್ಪ ಸರ್ಕಾರ, ಆರ್ ಆರ್ ನಗರಕ್ಕೆ ಮುನಿರತ್ನ ಅವರು ಎಂದು ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಮುನಿರತ್ನ ಅವರು, ಕ್ಷೇತ್ರದಲ್ಲಿ ಕಾರ್ಯಕರ್ತರು, ಮುಖಂಡರು ಶಕ್ತಿಮೀರಿ ಕೆಲಸ ಮಾಡ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಮತದಾರರು ಮತ ಚಲಾಯಿಸುತ್ತಾರೆ. ಮುನಿರತ್ನ ಕೆಲಸ ಮಾಡ್ತಾನೆ ಅನ್ನೋ ನಂಬಿಕೆ ಜನರಲ್ಲಿದೆ ಎಂದು ತಿಳಿಸಿದರು.