ದಾವಣಗೆರೆ: ಆರು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ಗೃಹಿಣಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಇರೋಡಿ ತಾಂಡಾದಲ್ಲಿ ನಡೆದಿದೆ.
ಶಿಲ್ಪಾ (22) ಸಾವನ್ನಪ್ಪಿದ ಗೃಹಿಣಿ. ವರದಕ್ಷಿಣೆ ಕಿರುಕಳ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತ ಶಿಲ್ಪಾಳ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಶಿಲ್ಪಾ ಕಳೆದ ಆರು ತಿಂಗಳ ಹಿಂದೆ ದೀಪಕ್ ಜೊತೆ ಮದುವೆಯಾಗಿದ್ದು, ಮೂರು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಭಾನುವಾರ ರಾತ್ರಿಯೇ ಶಿಲ್ಪಾ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ತಿಳಿದು ಶಿಲ್ಪಾ ಪೋಷಕರು ಬಂದು ಗಲಾಟೆ ಮಾಡಿದ್ದಾರೆ. ಜಗಳ ಮಾಡಿದ ನಂತರ ಶಿಲ್ಪಾ ಪತಿ ದೀಪಕ್ ಹಾಗೂ ಆತನ ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದಾರೆ.
ಪತಿ ಮತ್ತು ಆತನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಶಿಲ್ಪಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.