ಬೆಂಗಳೂರು: ಆರಂಭಿಕ ಆಘಾತದಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಚಾವ್ ಆಗಿದ್ದಾರೆ.
ಹೌದು. ದೂರುದಾರ ದಿನೇಶ್ ಕಲ್ಲಹಳ್ಳಿ ಅವರು ಖುದ್ದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಎಫ್ಐಆರ್ ಆಗುವುದೇ ಅನುಮಾನವಾಗಿದೆ.
ಬಚಾವ್ ಹೇಗೆ?
ಆರಂಭದಲ್ಲಿ ದೂರು, ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ಠಾಣೆಗಳಲ್ಲಿ ಎಫ್ಐಆರ್ ಆಗುತ್ತದೆ. ಇದು ಸಹಜವಾಗಿ ನಡೆಯುವ ಪ್ರಕ್ರಿಯೆ. ಆದರೆ ಈ ಪ್ರಕರಣದಲ್ಲಿ ಆರಂಭದಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ ದೂರುದಾರರು ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಲ್ಲಿಸಬೇಕಿತ್ತು. ದೂರುದಾರರು ಸಂತ್ರಸ್ತೆಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಆಕೆಯ ಬದಲು ನಾನು ದೂರು ನೀಡುತ್ತಿದ್ದೇನೆ ಎಂದು ಹೇಳಿದ್ದರು.
ಬೆದರಿಕೆ ವಿಚಾರವನ್ನು ಪ್ರಸ್ತಾಪ ಮಾಡಿದ ಹಿನ್ನೆಲೆಯಲ್ಲಿ ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸಬಹುದು ಎಂಬುದರ ಬಗ್ಗೆ ಪರ/ ವಿರೋಧ ಚರ್ಚೆಗಳು ಆರಂಭವಾಗಿತ್ತು. ಆದರೆ ಈಗ ದೂರುದಾರರೇ ದೂರನ್ನು ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗುವುದು ಅನುಮಾನ. ದೂರು ಇಲ್ಲದ ಮೇಲೆ ಎಫ್ಐಆರ್ ಮಾಡಿ ತನಿಖೆ ಮಾಡಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಈಗ ವ್ಯಕ್ತವಾಗಿದೆ.
ಈ ಪ್ರಕರಣದ ಕೇಂದ್ರ ವ್ಯಕ್ತಿಯಾಗಿರುವ ಯುವತಿ ದೂರು ನೀಡಿದರೆ ಮಾತ್ರ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಗಲಿದೆ. ಯುವತಿ ನನ್ನ ಫೋಟೋ ಬಳಸಿ ನಕಲಿ ವಿಡಿಯೋ ಮಾಡಲಾಗಿದೆ ಎಂದು ದೂರು ನೀಡಿದರೆ ದಿನೇಶ್ ಕಲ್ಲಹಳ್ಳಿಗೆ ಕಷ್ಟವಾಗಲಿದೆ. ಒಂದು ವೇಳೆ ಸಚಿವರೇ ನನಗೆ ಮೋಸ ಮಾಡಿದ್ದಾರೆ ಎಂದು ದೂರು ನೀಡಿದರೆ ಸಾಹುಕಾರ್ಗೆ ಸಂಕಷ್ಟವಾಗಲಿದೆ.
ಈಗಾಗಲೇ ರಮೇಶ್ ಜಾರಕಿಹೊಳಿ, ತನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ರಾಜಕೀಯ ಏಳಿಗೆ ಸಹಿಸದೇ ನಕಲಿ ವಿಡಿಯೋ ತಯಾರಿಸಲಾಗಿದೆ. ಯುವತಿಗೆ 5 ಕೋಟಿ ಹಣ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ನಕಲಿ ದೂರುಗಳು ದಾಖಲಾಗುವುದು ಹೊಸದೆನಲ್ಲ. ಆದರೆ ಈ ಪ್ರಕರಣದಲ್ಲಿ ಹಾಲಿ ಸಚಿವರ ವಿರುದ್ಧ ಈ ರೀತಿ ದೊಡ್ಡ ಆರೋಪ ಮಾಡಿ ದೂರು ದಾಖಲಾಗಿ ಬಳಿಕ ಅದನ್ನು ಹಿಂದಕ್ಕೆ ಪಡೆದಿರುವುದು ವಿಶೇಷ. ಕರ್ನಾಟಕದ ಪೊಲೀಸ್ ಇತಿಹಾಸದಲ್ಲಿ ಈ ರೀತಿ ನಡೆದಿಲ್ಲ. ಈ ಕಾರಣಕ್ಕೆ ಈ ಪ್ರಕರಣ ಮುಂದೆ ಹೇಗೆ ಸಾಗುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.