– ತುಮಕೂರಿನ ಪ್ರಸಿದ್ಧ ಜುವೆಲ್ಲರಿ ಅಂಗಡಿಯಲ್ಲಿ ಕೃತ್ಯ
– 1.854 ಗ್ರಾಂ ಚಿನ್ನ ಕಳ್ಳತನ
ತುಮಕೂರು: ಉದ್ಯೋಗ ನೀಡಿದ ಸಂಸ್ಥೆಗೆ ಕನ್ನ ಹಾಕಿದ್ದ ಪ್ರಸಿದ್ದ ಜ್ಯುವೆಲ್ಲರಿ ಅಂಗಡಿಯ ಉದ್ಯೋಗಿಗಳು ಈಗ ಜೈಲುಪಾಲಾಗಿದ್ದಾರೆ.
2019ರ ಏಪ್ರಿಲ್ 22 ರಿಂದ 2020 ಜೂನ್ 14ರ ನಡುವೆ ನಗರದ ಜನರಲ್ ಕಾರ್ಯಪ್ಪ ರಸ್ತೆಯಲ್ಲಿನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಆದಿಲ್, ರಿತೇಶ್ ಕುರುಪ್ ಎಂಬುವರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮಾಲೀಕ ಪ್ರಕಾಶ್ ಕುಮಾರ್ ರಾಥೋಡ್ 2020ರ ಜೂನ್ 19ರಂದು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಅಸಲಿ ಚಿನ್ನಾಭರಣದ ಬದಲಿಗೆ ನಕಲಿ ಚಿನ್ನಾಭರಣ ಇಟ್ಟು ಸಂಸ್ಥೆಗೆ ಮೋಸ ಮಾಡಿದ್ದಾರೆ. ಒಟ್ಟು 1,30,64.310 ರೂ. ಮೌಲ್ಯದ 2 ಕಿಲೋ 470 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ವಾರ್ಷಿಕ ಆಡಿಟ್ ಮಾಡುವಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣದ ತನಿಖೆ ಆರಂಭಿಸಿದ ನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 1 ಕಿಲೋ 854 ಗ್ರಾಂ ತೂಕದ ಚಿನ್ನಾಭರಣ ಮತ್ತು 4,05,000 ರೂ., ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿನ್ನಾಭರಣ ಹಾಗೂ ನಗದು ಸೇರಿ ಒಟ್ಟು 87,49,282 ರೂ.ಗಳಾಗಿದ್ದು, ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಂಧಿತರು, ತುಮಕೂರಿನ ವಿನೋಬ ನಗರದ ಮೊಹಮದ್ ಆದಿಲ್(43), ಕೇರಳ ರಾಜ್ಯ ಪತ್ತನಂತಿಟ್ಟ ಜಿಲ್ಲೆ, ತಿರುವಳ್ಳ ತಾಲ್ಲೂಕು, ಪೆರಿಗೆರ ಗ್ರಾಮದ ರಿತೇಶ್ ಕುಮಾರ್(35), ಗುಬ್ಬಿ ಟೌನ್ ನಿವಾಸಿಗಳಾದ ಮಹೇಶ್(32), ಮೀನಾಕ್ಷಿ ಕೋಂ ಮಹೇಶ್(26), ಹೆಬ್ಬೂರಿನ ಮಸೀದಿ ಮೊಹಲ್ಲಾ ನಿವಾಸಿ ರುಕ್ಸಾನ (28) ಪೊಲೀಸ್ ವಿಚಾರಣೆಯಲ್ಲಿ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಮತ್ತು ಚಿನ್ನಾಭರಣಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಎಎಸ್ಪಿ ಟಿ.ಜೆ ಉದೇಶ್ ಮಾರ್ಗದರ್ಶನದಲ್ಲಿ ನಗರ ಡಿವೈಎಸ್ಪಿ ಎಚ್.ಜೆ ತಿಪ್ಪೇಸ್ವಾಮಿ, ನಗರ ಸಿಪಿಐ ನವೀನ್ ಬಿ., ಪಿಎಸ್ಐ ಮಂಜುನಾಥ್ ಬಿ.ಸಿ., ಪಿಎಸ್ಐ, ಎಎಸ್ಐ ರಮೇಶ್, ನಗರ ಠಾಣೆ ಸಿಬ್ಬಂದಿಗಳಾದ ಮಂಜುನಾಥ, ಪ್ರಸನ್ನ ಕುಮಾರ್, ರಾಮಚಂದ್ರಯ್ಯ, ಸಿದ್ದೇಶ್ವರ ಈರಣ್ಣ, ನಾಗರಾಜ, ಜೈ ಪ್ರಕಾಶ್, ನವೀನ, ಅಶ್ವಿನಿ, ದಯಾಮಣಿ, ಕವಿತ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿಗಳಾದ ನರಸಿಂಹರಾಜು, ರಮೇಶ್, ಜಗದೀಶ್ ತಂಡವನ್ನು ಎಸ್ಪಿ ಡಾ.ಕೆ ವಂಶಿಕೃಷ್ಣ ಅಭಿನಂದಿಸಿದ್ದಾರೆ.