ಕಾರವಾರ: ಶಾಸಕ ಎನ್.ಮಹೇಶ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಕಾರವಾರ-ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಕರೆ ಮಾಡಿ 50 ಸಾವಿರ ರೂ. ವಂಚಿಸಿದ್ದಾನೆ.
ರಾಮನಗರದ ಕನಕಪುರ ತಾಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್(23) ಶಾಸಕರಿಗೆ ವಂಚಿಸಿ ಬಂಧಿತನಾದ ವ್ಯಕ್ತಿ. ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಏನಿದು ಘಟನೆ?
ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರಿಗೆ 15 ದಿನದ ಹಿಂದೆ ರಾಮನಗರದ ಕನಕಪುರ ತಾಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್ ಕರೆ ಮಾಡಿ ನಾನು ಶಾಸಕ ಎನ್.ಮಹೇಶ್ ಅವರ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ತುರ್ತಾಗಿ 50 ಸಾವಿರ ರೂ. ಹಣ ಬೇಕಿದೆ ಎಂದು ಸುಳ್ಳು ಹೇಳಿ ತನ್ನ ಸ್ನೇಹಿತನ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ.
ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರು ಬೆಂಗಳೂರಿಗೆ ತೆರಳಿದ್ದಾಗ ವಿಧಾನಸೌದದಲ್ಲಿ ಎನ್.ಮಹೇಶ್ ಅವರು ಮುಖಾಮುಖಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ಈ ವಿಚಾರ ಮಾತನಾಡಿದ್ದು, ಮಹೇಶ್ ಅವರ ಆಪ್ತ ಕಾರ್ಯದರ್ಶಿ ಎಂದು ಕರೆ ಮಾಡಿದ್ದರು, 50 ಸಾವಿರ ಹಣ ನೀಡಿದ್ದೇನೆ ಎಂದು ಹೇಳಿದ್ದಾರೆ. ಆಗ ಅಲ್ಲಿಯೇ ಇದ್ದ ಅವರ ಆಪ್ತಕಾರ್ಯದರ್ಶಿ ನಾನು ಕೇಳಿಲ್ಲವೆಂದು ತಿಳಿಸಿದ್ದಾರೆ. ಕೊನೆಗೆ ವಂಚನೆಗೆ ಒಳಗಾದ ಕುರಿತು ಶಾಸಕರಿಗೆ ಅರಿವಾಗಿದೆ.
ತಕ್ಷಣ ಶಾಸಕ ಎನ್.ಮಹೇಶ್ ರವರ ಆಪ್ತ ಕಾರ್ಯದರ್ಶಿ ಕೊಳ್ಳೆಗಾಲ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಇದನ್ನೇ ಕಸುಬನ್ನಾಗಿಸಿಕೊಂಡಿದ್ದು, ಕೇವಲ ಶಾಸಕಿ ರೂಪಾಲಿ ನಾಯ್ಕ ರವರಿಗಲ್ಲದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಲವರಿಗೆ ಇದೇ ರೀತಿ ಕರೆಮಾಡಿ ವಂಚಿಸುವ ಪ್ರಯತ್ನ ಮಾಡಿರುವುದು ಬೆಳಕಿಗೆ ಬಂದಿದೆ.