ಬೆಂಗಳೂರು: ಆನ್ಲೈನ್ ಕ್ಲಾಸಿನಲ್ಲಿ ಪಾಠ ಕೇಳುತ್ತಿದ್ದ ಬಾಲಕ ನಿಗೂಢ ರೀತಿಯಲ್ಲಿ ಜೋಗುಳದ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೂರವಲಯ ದರ್ಗಾಜೋಗಹಳ್ಳಿಯಲ್ಲಿ ನಡೆದಿದೆ.
ಮಂಜುನಾಥ್ ಎಂಬವರ ಮಗ ವಿಶ್ವಾಸ್ (10) ಸಂಶಯಸ್ಪದವಾಗಿ ಸಾವನ್ನಪ್ಪಿದ್ದಾನೆ. ಈತ ಜ್ಞಾನಗಂಗಾ ವಿದ್ಯಾಸಂಸ್ಥೆಯ 5ನೇ ತರಗತಿಯ ವಿದ್ಯಾರ್ಥಿ. ಕೊರೊನಾ ಹಿನ್ನೆಲೆಯಲ್ಲಿ ಆನ್ಲೈನ್ ಕ್ಲಾಸ್ ಮೂಲಕ ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು, ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಆನ್ಲೈನ್ ಕ್ಲಾಸ್ ಇದ್ದ ಕಾರಣಕ್ಕೆ ಆತನ ಪೋಷಕರು ರೂಮ್ ಒಳಗೆ ಕಳುಹಿಸಿದ್ದಾರೆ. ಮನೆಯಲ್ಲಿ ಸಣ್ಣ ಮಗುವಿದ್ದ ಕಾರಣಕ್ಕೆ ರೂಮ್ ನಲ್ಲಿ ಜೋಕಾಲಿ ಕಟ್ಟಲಾಗಿತ್ತು.
ಆನ್ಲೈನ್ ಕ್ಲಾಸಿಗಾಗಿ ಕೋಣೆಗೊಳಗಡೆ ಹೋದ ಹೋದ ವಿಶ್ವಾಸ್ ಜೋಕಾಲಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ. ಕೆಲ ಗಂಟೆ ಕಳೆದರೂ ವಿಶ್ವಾಸ್ ಕೋಣೆಯಿಂದ ಹೊರಗೆ ಬರದಿದ್ದರಿಂದ ಪೋಷಕರು ರೂಮ್ ಒಳ ಹೋಗಿ ನೋಡಿದ್ದಾರೆ. ಆಗ ಅವರ ಕಣ್ಣಿಗೆ ಕಂಡಿದ್ದು ಜೋಕಾಲಿ ಹುರುಳಿಗೆ ಸಿಲುಕಿ ಸಾವನ್ನಪ್ಪಿದ್ದ ವಿಶ್ವಾಸ್ ಮೃತದೇಹ. ಸದ್ಯ ವಿಶ್ವಾಸ್ ಸಾವಿನ ಬಗ್ಗೆ ಸಂಶಯವಿದ್ದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.