ಚೆನ್ನೈ: ಕೊರೊನಾ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದೆ. ಕಳೆದ ಮಾರ್ಚ್ ತಿಂಗಳಿನಿಂದ ಕೊರೊನಾ ಭೀತಿಯಿಂದ ಲಾಕ್ಡೌನ್ ಹೇರಲಾದ ಬಳಿಕ ಶಾಲಾ- ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಇನ್ನೂ ಕೆಲವೆಡೆ ಶಾಲೆಗಳನ್ನು ತೆರೆಯಲು ಮುಂದಾಗಿಲ್ಲ. ಹೀಗಾಗಿ ಶಿಕ್ಷಕರು ಆನ್ಲೈನ್ ಕ್ಲಾಸಿನತ್ತ ಮುಖ ಮಾಡಿದ್ದಾರೆ. ಆದರೆ ಈ ಆನ್ಲೈನ್ ಕ್ಲಾಸ್ ಬಡ ಮಕ್ಕಳಿಗೆ ಹೊರೆಯಾಗಿದೆ.
ಅಂತೆಯೇ ಚೆನ್ನೈ ಮೂಲದ ಬಡ ಬಾಲಕನಿಗೆ ಆನ್ಲೈನ್ ಕ್ಲಾಸಿಗೆ ಹಾಜರಾಗಲು ಮೊಬೈಲ್ ಖರೀದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆತ ಕಳ್ತನ ಮೊರೆ ಹೋಗಿದ್ದು, ಮೊಬೈಲ್ ಒಂದನ್ನು ಕದ್ದಿದ್ದಾನೆ. ಹೌದು. 13 ವರ್ಷದ ಕಾರ್ಪೋರೇಶನ್ ಶಾಲೆಯ ಬಾಲಕನ ತಂದೆ ಬಿಸ್ಕೆಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ತಾಯಿ, ಬೇರೆಯವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಈ ಮೂಲಕ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಈ ಮಧ್ಯೆ ಶಿಕ್ಷಕರು ಆನ್ಲೈನ್ ಕ್ಲಾಸಿಗೆ ಹಾಜರಾಗುವಂತೆ ಒತ್ತಡ ಹೇರುತ್ತಿದ್ದರು. ಬಾಲಕ ಬಡ ಕುಟುಂಬದವನಾಗಿದ್ದರಿಂದ ಮಗನಿಗೆ ಮೊಬೈಲ್ ಕೊಡಿಸಲು ಪೋಷಕರಿಗೆ ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ತೆಗೆದುಕೊಳ್ಳಲು ಸಾಧ್ಯವಾಗದಿದ್ದರಿಂದ ಅಕ್ಕ-ಪಕ್ಕ ಮನೆಯ ಇಬ್ಬರು ತಮ್ಮ ಜೊತೆ ಕಳ್ಳತನಕ್ಕೆ ಬಂದರೆ ನಿನಗೆ ಮೊಬೈಲ್ ಕೊಡಿಸುವುದಾಗಿ ಬಾಲಕನಿಗೆ ಆಮಿಷವೊಡ್ಡಿದ್ದಾರೆ. ಇತ್ತ ಒಂದು ವೇಳೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದರೆ ಬಾಲಕನನ್ನೇ ಬಲಿವಶು ಮಾಡುವ ಹುನ್ನಾರ ಆ ಇಬ್ಬರು ವ್ಯಕ್ತಿಗಳದ್ದಾಗಿತ್ತು. ಇಬ್ಬರು ವ್ಯಕ್ತಿಗಳ ಮಾತು ನಂಬಿ, ತನಗೆ ಮೊಬೈಲ್ ಸಿಗುತ್ತೆ ಎಂಬ ಆಸೆಯಿಂದ ಬಾಲಕ ಅವರ ಜೊತೆ ಕಳ್ಳತನಕ್ಕೆ ಇಳಿದು, ಎಲ್ಲರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಆನ್ಲೈನ್ ಶಿಕ್ಷಣ- ನೆಟ್ವರ್ಕ್ ಅರಸಿ ಇಂದಿಗೂ ವಿದ್ಯಾರ್ಥಿಗಳ ಅಲೆದಾಟ
ಬಂಧಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಾಲಕ ತನ್ನ ಪರಿಸ್ಥಿತಿಯ ಬಗ್ಗೆ ಪೊಲೀಸರಿಗೆ ಮನಮುಟ್ಟುವಂತೆ ಹೇಳಿದ್ದಾನೆ. ಇದರಿಂದ ಬೇಸರಗೊಂಡ ಪೊಲೀಸರು, ಆತನಿಗೆ ತಾವೇ ಖುದ್ದಾಗಿ ಹೊಸ ಮೊಬೈಲ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ಫಿಡ್ಜ್ ಟ್ರೇ ಬಳಸಿ ಆನ್ಲೈನ್ ಕ್ಲಾಸ್- ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ