ಬೆಂಗಳೂರು: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಶಿರಾ ಕ್ಷೇತ್ರದ ಶಾಸಕ ರಾಜೇಶ್ ಗೌಡ ಅವರು ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ.
ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಇಬ್ಬರು ಸಚಿವರು, ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಾಲನಂದನಾಥ ಸ್ವಾಮೀಜಿಗಳ ಆರ್ಶೀವಾದ ಪಡೆದಿದ್ದಾರೆ. ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್, ಸಚಿವ ಗೋಪಾಲಯ್ಯ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿ.ಹೆಚ್.ರಾಮಚಂದ್ರ ಉಪಸ್ಥಿತರಿದ್ದರು. ಮುನಿರತ್ನ ಅವರು ಭೇಟಿ ನೀಡುತ್ತಿದ್ದಂತೆ ಶಿರಾ ಕ್ಷೇತ್ರದ ನೂತನ ಶಾಸಕ ರಾಜೇಶಗೌಡ ಸಹ ಮಠಕ್ಕೆ ಭೇಟಿ ನೀಡಿದರು.
ಆರ್ಆರ್ ನಗರ ಶಾಸಕ ಮುನಿರತ್ನ ಅವರು 57,936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಗಿಂದ ಎರಡು ಪಟ್ಟು ಮತ ಪಡೆದು ಗೆಲುವು ಕಂಡಿದ್ದಾರೆ. ಶಿರಾ ಶಾಸಕ ರಾಜೇಶ್ ಗೌಡ ಅವರು ಸಹ ಸುಮಾರು 11 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.