– ಜೀವನದಲ್ಲಿ ಜಿಗುಪ್ಸೆ, ಜಲಪಾತ ಕಂಡು ಜ್ಞಾನೋದಯ
ಶಿವಮೊಗ್ಗ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಬೆಂಗಳೂರು ಮೂಲದ ಚೇತನ್ ಕುಮಾರ್ (35) ಎಂದು ಗುರುತಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಆದ ದಿನದಿಂದ ಕೆಲಸ ಇಲ್ಲದ ಕಾರಣ ಚೇತನ್ ಕುಮಾರ್ ಮನೆಯಲ್ಲಿಯೇ ಇರುತ್ತಿದ್ದನಂತೆ. ಈ ವೇಳೆ ತನ್ನನ್ನು ಮನೆಯಲ್ಲಿ ಯಾರು ಮಾತನಾಡಿಸುತ್ತಿರಲಿಲ್ಲ ಎಂದು ಯುವಕ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ಹೀಗಾಗಿಯೇ ಬೇಸರಗೊಂಡ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಇಂದು ಮುಂಜಾನೆ ಆಗಮಿಸಿದ್ದಾನೆ. ನಂತರ ರಾಣಿ ಫಾಲ್ಸ್ ಬಳಿ ಕುಳಿತು ಯೋಚನೆ ಮಾಡಿದಾಗ ಈತನಿಗೆ ಜ್ಞಾನೋದಯ ಆಗಿದೆಯಂತೆ. ಅಲ್ಲದೆ ಈ ಯುವಕ ಫಾಲ್ಸ್ ತುದಿಯಲ್ಲಿ ಕುಳಿತಿರುವುದನ್ನು ದೂರದಿಂದಲೇ ಗಮನಿಸಿದ ಭದ್ರತಾ ಸಿಬ್ಬಂದಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ನಂತರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ವ್ಯಕ್ತಿಯ ಮನವೊಲಿಸಿ ಮೇಲಕ್ಕೆ ಕರೆ ತಂದಿದ್ದಾರೆ. ನಂತರ ಜೋಗ ಠಾಣೆಗೆ ಯುವಕನನ್ನು ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಯುವಕನನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸುವ ತಯಾರಿ ನಡೆಸಿದ್ದಾರೆ.