ಬೆಂಗಳೂರು: ಮೂರು ವರ್ಷದ ಮಗು ಆಟ ಆಡುತ್ತಾ ಚಿಕ್ಕ ಗಣೇಶ ಮೂರ್ತಿಯನ್ನು ನುಂಗಿದ ಘಟನೆ ಬೆಂಗಳೂರಿನ ಹೆಚ್ಎಎಲ್ ನಲ್ಲಿ ನಡೆದಿದ್ದು, ಪೋಷಕರ ಸಮಯಪ್ರಜ್ಞೆಯಿಂದ ಮಗು ಬದುಕುಳಿದಿದೆ.
ಶುಕ್ರವಾರ ರಾತ್ರಿ ಮಗುವಿಗೆ ಆಡಲು ಪೋಷಕರು ಆಟಿಕೆ ನೀಡಿದ್ದರು. ಕೆಲ ಸಮಯದ ಬಳಿಕ ಆಟಿಕೆಯಲ್ಲಿ ಗಣೇಶ ಮೂರ್ತಿ ಇರಲಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಕುಡಲೇ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಎಕ್ಸ್ ರೇ ತೆಗೆದು ನೋಡಿದಾಗ ಅನ್ನನಾಳದಲ್ಲಿ ಗಣೇಶನ ವಿಗ್ರಹ ಕಂಡು ಬಂದಿದೆ.
ವಿಗ್ರಹ ಮೆಟಲ್ ವಿಗ್ರಹವಾಗಿದ್ದರಿಂದ ಎಂಡೋಸ್ಕೋಪಿ ಮೂಲಕ ಮೂರ್ತಿಯನ್ನು ಹೊಟ್ಟೆಯ ಭಾಗಕ್ಕೆ ತಂದಿದ್ದಾರೆ. ನಂತರ ಹಂತ ಹಂತವಾಗಿ ನಿರ್ದಿಷ್ಟ ಜಾಗಕ್ಕೆ ತಂದ ವೈದ್ಯರು, ಮಗುವನ್ನು ಉಲ್ಟಾ ಮಲಗಿಸಿ ಗಣೇಶ ಮೂರ್ತಿಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೋಷಕರ ಸಮಯ ಪ್ರಜ್ಞೆಯಿಂದ ಮಗುವಿ ಜೀವ ಉಳಿದಿದೆ. ಇದನ್ನೂ ಓದಿ: ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೋವಿಡ್ ಲಸಿಕೆ – ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ
ಮಕ್ಕಳನ್ನು ಒಂಟಿಯಾಗಿ ಆಟವಾಡೋಕೆ ಬಿಟ್ಟ ವೇಳೆ ಅಪಾಯಕಾರಿ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕೊಟ್ಟರು ಕೂಡ ಮಗುವಿನ ಜೊತೆಯಲ್ಲಿ ಯಾರಾದರೂ ಇದ್ರೆ ಒಳ್ಳೆಯದು ಅಂತಾ ವೈದ್ಯರು ಪೋಷಕರಿಗೆ ತಿಳಿ ಹೇಳಿದ್ದಾರೆ. ನೀವು ಏನಾದರೂ ಮಕ್ಕಳ ಕೈಗೆ ಈ ರೀತಿಯ ಚಿಕ್ಕ ಚಿಕ್ಕ ವಸ್ತುಗಳನ್ನು ನೀಡುವ ಮೊದಲು ಎಚ್ಚರಿಕೆ ವಹಿಸಿ.