ಬೆಂಗಳೂರು: ಆಟ ಆಡುತ್ತಿದ್ದಾಗ ಬಾವಿಗೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಹೆಣ್ಣೂರು ಬಸ್ ಡಿಪೋ ಹಿಂಭಾಗದಲ್ಲಿ ನಡೆದಿದೆ.
6 ವರ್ಷದ ಅಶ್ವಿನ್ ಮೃತ ಬಾಲಕ. ಶುಕ್ರವಾರ ಸಂಜೆ ಆಟ ಆಡುವ ವೇಳೆ ಆಕಸ್ಮಿಕವಾಗಿ ಅಶ್ವಿನ್ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಅಶ್ವಿನ್, ಸಾಯಿನಾ ಮತ್ತು ಮಣಿ ದಂಪತಿಯ ಪುತ್ರನಾಗಿದ್ದು, ತಂದೆ ಮಣಿ ಗಾರೆ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಇನ್ನೂ ತಾಯಿ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.
ಅಲ್ಲಿನ ಏಳೆಂಟು ಮನೆಗಳಿಗೆ ಇದೇ ಬಾವಿ ನೀರಿಗೆ ಆಶ್ರಯವಾಗಿತ್ತು. ಆದರೆ ಇದೀಗ ಬಾವಿಗೆ ಬಿದ್ದ ಬಾಲಕ ಮೃತಪಟ್ಟಿರುವುದರಿಂದ ತೆರೆದ ಬಾವಿ ಇಟ್ಟು ಸೌಕರ್ಯ ನೀಡದ ಮಾಲೀಕರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಬಾಣಸವಾಡಿ ಪೊಲೀಸರು ಬಾವಿಯಿಂದ ಬಾಲಕನ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು. ಸ್ಥಳದಲ್ಲಿ ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.