ಚಿಕ್ಕಬಳ್ಳಾಪುರ: ಅಡುಗೆ ಎಣ್ಣೆ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಆಟೋ ಮೇಲೆ ಪಲ್ಟಿಯಾಗಿ ಸಾವಿರಾರು ಲೀಟರ್ ಆಡುಗೆ ಎಣ್ಣೆ ರಸ್ತೆ ಪಾಲಾದ ಘಟನೆ ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ವೀರ ದಿಮ್ಮಮ್ಮನ ಕಣಿವೆಯ ತಿರುವಿನಲ್ಲಿ ನಡೆದಿದೆ.
ಅಪಘಾತದಲ್ಲಿ ಆಟೋ ನುಜ್ಜು ಗುಜ್ಜಾಗಿದ್ದು, ಟ್ಯಾಂಕರ್ ನಲ್ಲಿದ್ದ ಸರಿಸುಮಾರು 12 ಸಾವಿರ ಲೀಟರ್ ಅಡುಗೆ ಎಣ್ಣೆ ರಸ್ತೆ ಪಾಲಾಗಿದೆ. ಚಿಕ್ಕಬಳ್ಳಾಪುರ ಕಡೆಯಿಂದ ಗೌರಿಬಿದನೂರು ಕಡೆಗೆ ಸಾಗುತ್ತಿದ್ದಾಗ ಆಟೋವು ಟ್ಯಾಂಕರ್ ಅನ್ನು ಹಿಂದಿಕ್ಕಲು ಮುನ್ನುಗ್ಗಿದಾಗ ಟ್ಯಾಂಕರ್ ಸಹ ವೇಗವಾಗಿ ತಿರುಗಿದೆ. ಈ ವೇಳೆ ಆಯ ತಪ್ಪಿ ಆಟೋ ಮೇಲೆ ಉರುಳಿದೆ.
ಆಟೋದಲ್ಲಿದ್ದ ಐವರು ಮತ್ತು ಟ್ಯಾಂಕರ್ ನಲ್ಲಿದ್ದ ಇಬ್ಬರು ಆಶ್ಚರ್ಯಕರವಾಗಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಚಿಕ್ಕಬಳ್ಳಾಪುರ- ಗೌರಿಬಿದನೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಟ್ಯಾಂಕರ್ ನಲ್ಲಿದ್ದ ಅಡುಗೆ ಎಣ್ಣೆ ಹೊಳೆಯಂತೆ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಕಣಿವೆ ಪ್ರದೇಶದಲ್ಲಿ ವಾಹನ ಚಲಾಯಿಸಲು ಸಹಾ ತೊಂದರೆಯಾಗುತ್ತಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೋಲಿಸರು ಭೇಟಿ ನೀಡಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.