ಚಾಮರಾಜನಗರ: ಉತ್ತರ ಪ್ರದೇಶದ ಹತ್ರಾಸ್ ಗ್ಯಾಂಗ್ರೇಪ್ ಸಂತ್ರಸ್ತೆಯನ್ನು ಕೊಲೆ ಮಾಡಿದ ಸ್ಥಳಕ್ಕೆ ನಾಲ್ವರು ಆರೋಪಿಗಳನ್ನು ಕರೆದುಕೊಂಡು ಹೋಗಿ ಆಂಧ್ರ ಪ್ರದೇಶದ ರೀತಿಯಲ್ಲಿ ಶಿಕ್ಷೆ ನೀಡಬೇಕು ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು. ಇದನ್ನೂ ಓದಿ: ಹತ್ರಾಸ್ ಪ್ರಕರಣ – ಎಸ್ಪಿ ಸೇರಿ ಐವರು ಪೊಲೀಸ್ ಅಧಿಕಾರಿಗಳು ಅಮಾನತು
ನಗರದಲ್ಲಿ ಮಾತನಾಡಿದ ಎನ್.ಮಹೇಶ್, ಉತ್ತರ ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ಮೂವರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆಯಾಗಿದೆ. ಈಗ ಹತ್ರಾಸ್ ಗ್ರಾಮದ ಯುವತಿಯ ಮೇಲೆ ಗ್ಯಾಂಗ್ರೇಪ್ ಮಾಡಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಗಳು ಮತ್ತು ಉತ್ತರ ಪ್ರದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಇದು ಕೊಲೆಗಡುಕ ರಾಜ್ಯ ಎಂದು ನನಗೆ ಅನ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಅತ್ಯಾಚಾರಿಗಳಿಗೆ ಕಠೋರ ಶಿಕ್ಷೆ- ಯೋಗಿ ಆದಿತ್ಯನಾಥ್ ಭರವಸೆ
ಕೊಲೆಗಡುಕರು ತಪ್ಪಿಸಿಕೊಳ್ಳಲು ರಾಜ್ಯಭಾರ ನಡೆಸುತ್ತಿರುವವರು ಸಹಾಯ ನೀಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಯೋಗಿ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಸಂತ್ರಸ್ತೆ ಎಲ್ಲಿ ರೇಪ್ ಆಗಿ ಕೊಲೆಯಾದಳೋ ಅಲ್ಲಿಯೇ ನಾಲ್ವರು ಆರೋಪಿಗಳನ್ನ ಕರೆದುಕೊಂಡು ಹೋಗಿ ಶಿಕ್ಷೆ ಕೊಡಬೇಕು. ಆಂಧ್ರ ಪ್ರದೇಶ ರೀತಿಯಲ್ಲೇ ಇವರಿಗೆ ಎನ್ಕೌಂಟರ್ ಮಾಡಿ ಶಿಕ್ಷೆ ನೀಡಬೇಕು ಎಂದು ಎನ್.ಮಹೇಶ್ ಹೇಳಿದರು.
ಆರೋಪಿಗಳಿಗೆ ಶಿಕ್ಷೆ ಕೊಡುವುದನ್ನು ಇಡೀ ದೇಶ ನೋಡಬೇಕು. ಆದ್ದರಿಂದ ಉತ್ತರ ಪ್ರದೇಶದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.
ಉತ್ತರ ಪ್ರದೇಶದ ದಲಿತ ಹೆಣ್ಣು ಮಕ್ಕಳನ್ನ ಅಲ್ಲಿನ ಠಾಕೂರ್ ಮತ್ತು ಜಾಟರ್ ಗಳು ಫ್ರೀ ಪ್ರಾಡಕ್ಟ್ ಎಂದು ತಿಳಿದುಕೊಂಡಿದ್ದಾರೆ. ಹೀಗಾಗಿ ಇದನ್ನ ನಿಯಂತ್ರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಇಲ್ಲವಾದರೆ ಯುಪಿ ರಾಜಕಾರಣ ಉಲ್ಟಾ ಆಗುತ್ತದೆ ಎಂದು ಎನ್.ಮಹೇಶ್ ಆಕ್ರೋಶದಿಂದ ಹೇಳಿದರು.