ಗುವಾಹಟಿ: ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಬಿಜೆಪಿ ಮುಖ್ಯಮಂತ್ರಿ ಆಗಿ ಆಯ್ಕೆಯಾಗುವ ಅವಕಾಶವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ತರುಣ್ ಗೊಗೊಯಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ತರುಣ್ ಗೊಗೊಯಿ ಅವರು, ಬಿಜೆಪಿ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ರಂಜನ್ ಗೊಗೊಯಿ ಅವರ ಹೆಸರಿಗೆ ಎಂಬ ಮಾಹಿತಿ ತಮ್ಮ ವಿಶ್ವಾಸನೀಯ ಮೂಲಗಳಿಂದ ಮಾಹಿತಿ ಲಭಿಸಿದೆ. ಮಾಜಿ ಸಿಐಜೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು, ಮುಂಬರುವ ನಿರೀಕ್ಷಿತ ಸಿಎಂ ಅಭ್ಯರ್ಥಿಯಾಗಿಯೂ ಕೂಡ ಅವರು ಅಂಗೀಕರಿಸಬಹುದು ಎಂದಿದ್ದಾರೆ.
‘ಎಲ್ಲವೂ ರಾಜಕೀಯ. ಅಯೋಧ್ಯೆ ರಾಮಮಂದಿರ ವಿವಾದ ಕುರಿತು ರಂಜನ್ ಗೊಗೊಯಿ ನೀಡಿದ ತೀರ್ಪಿನಿಂದ ಬಿಜೆಪಿ ಸಂತೋಷದಿಂದ ಇದೆ. ಈ ಹಿನ್ನೆಲೆಯಲ್ಲೇ ಅವರು ರಾಜಕೀಯ ಪ್ರವೇಶ ಮಾಡಿ ರಾಜ್ಯಸಭಾ ಸ್ಥಾನವನ್ನು ಅಂಗೀಕರಿಸಿದ್ದರು. ರಾಜ್ಯಸಭಾ ಸದಸ್ಯ ಸ್ಥಾನ ಅವರು ಏಕೆ ನಿರಾಕರಿಸಲಿಲ್ಲ? ಸುಲಭವಾಗಿ ಮಾನವ ಹಕ್ಕುಗಳ ಕಮಿಷನ್ನಲ್ಲಿ ಅಧ್ಯಕ್ಷರಾಗಬಹುದಿತ್ತು. ಅವರಿಗೆ ರಾಜಕೀಯ ಆಶ್ರಯವಿದ್ದು, ಆದ್ದರಿಂದಲೇ ನಾಮಿನೇಷನ್ ಅಂಗೀಕರಿಸಿದ್ದರು’ ಎಂದು ತರುಣ್ ಗೊಗೊಯಿ ಕಿಡಿಕಾರಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಕಾಂಗ್ರೆಸ್ ಮೈತ್ರಿ ಒಕ್ಕೂಟದ ಸಲಹೆಗಾರನಾಗಿ ಇರುತ್ತೇನೆ. ಮೈತ್ರಿ ಒಕ್ಕೂಟದ ಪರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಣಯ ಮಾಡಲಾಗುತ್ತದೆ ಎಂದು ತರುಣ್ ಗೊಗೊಯಿ ಸ್ಪಷ್ಟಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಮಾಜಿ ಶಾಸಕ ರಾಣಾ ಗೋಸ್ವಾಮಿ ಬೇರೆಯದ್ದೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾನು ತರುಣ್ ಗೊಗೊಯ್ ಅವರೊಂದಿಗೆ ಮಾತನಾಡಿದ್ದೇನೆ. ಎಐಯುಡಿಎಫ್ನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಸೂಕ್ತವಲ್ಲ ಎಂದು ಹೇಳಿದ್ದು, ಮಹಾ ಮೈತ್ರಿ ಸಾಧ್ಯವಾದರೆ ಪರಿಸ್ಥಿತಿ ಬದಲಾಗಬಹುದು ಎಂದಿದ್ದಾರೆ. ಅಸ್ಸಾಂನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.