ಬೆಂಗಳೂರು: ನಾವು ಏನಾದರೂ ಮಾಡಕ್ಕೆ ಹೋದರೆ ಅವನ್ಯಾರೋ ಡಿಸಿಎಂ ಬಾಯಿಗೆ ಬಂದ ಹಾಗೇ ಮಾತನಾಡ್ತಾನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ವಿರುದ್ಧ ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲಾಕ್ಡೌನ್ ಮುಗಿದು ಸೋಂಕು ಹೆಚ್ಚಾದ ಬಳಿಕ ಶಾಸಕರ ಸಭೆ ಕರೆದಿದ್ದಾರೆ. ಎಲ್ಲವನ್ನು ಸರ್ಕಾರಕ್ಕೆ ಬಿಟ್ಟಿದ್ದೇವೆ. ಏನು ಬೇಕಾದರೂ ತೀರ್ಮಾನ ಕೈಗೊಳ್ಳಲಿ ಎಂದು ಕಿಡಿಕಾರಿದರು.
ಲಾಕ್ಡೌನ್ ವಿಸ್ತರಣೆ ಬಗ್ಗೆ ಬೆಂಗಳೂರು ನಗರ ಶಾಸಕರೇ ಅಭಿಪ್ರಾಯ ತಿಳಿಸುತ್ತಾರೆ. ನಾವು ನಮ್ಮ ಜನರ ಸಂರಕ್ಷಣೆಗಾಗಿ ಏನೋ ಮಾಡುವುದಕ್ಕೆ ಹೋದರೆ ಅವನ್ಯಾರೋ ಡಿಸಿಎಂ ಬಾಯಿಗೆ ಬಂದ ಹಾಗೇ ಮಾತನಾಡ್ತಾರೆ. ಹೂ ಇಸ್ ಡಿ.ಕೆ.ಶಿವಕುಮಾರ್ ಅಂತ ಕೇಳುತ್ತಾರೆ ಎಂದು ಗರಂ ಆದರು.
ರಾಮನಗರ ಜಿಲ್ಲಾಧಿಕಾರಿಗಳು, ವೈದ್ಯಾಧಿಕಾರಿ ಹಾಗೂ ಸಂಸದರ ಜೊತೆಗೆ ಚರ್ಚೆ ನಡೆಸಿಯೇ ಕೆಲವು ತೀರ್ಮಾಣಗಳನ್ನು ಕೈಗೊಂಡಿದ್ವಿ. ಆದರೆ ಡಿಸಿಎಂ ಸರಿಯಾದ ಮಾಹಿತಿ ಇಲ್ಲದೆ ತಮಗೆ ತಿಳಿದಂತೆ ಮಾತನಾಡುತ್ತಾರೆ. ಇಂದು ಸಭೆಗೆ ನಮ್ಮ ಶಾಸಕರನ್ನು ಕಳುಹಿಸಿದ್ದೇವೆ. ಅಷ್ಟೇ ಅಲ್ಲದೆ ಅವರ ಕ್ಷೇತ್ರದ ಪರಿಸ್ಥಿತಿ ತಿಳಿಸುವಂತೆ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.