ಬೆಂಗಳೂರು: ಅವಕಾಶ ಸಿಕ್ಕರೆ ನಾನು ಖಂಡಿತವಾಗಿ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಮಾಜಿ ಸಚಿವ, ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಭಾನುವಾರದಿಂದ ಬಿಗ್ಬಾಸ್ ಸೀಸನ್-8 ಕಾರ್ಯಕ್ರಮ ಪ್ರಾರಂಭವಾಗಿದೆ. ಈ ವಿಚಾರವಾಗಿ ಮಾತನಾಡಿದ ಹೆಚ್. ವಿಶ್ವನಾಥ್, ನಾನು ಬಿಗ್ಬಾಸ್ ಮನೆಗೆ ಹೋಗಲು ಆಸೆಪಟ್ಟಿದ್ದೇನೆ. ನನ್ನ ಸ್ನೇಹಿತರು, ಆಪ್ತರು ಹಾಗೂ ಅಭಿಮಾನಿಗಳು ಬಿಗ್ಬಾಸ್ ಮನೆಗೆ ಹೋಗಲು ಒತ್ತಾಯಿಸುತ್ತಿದ್ದಾರೆ. ಬಿಗ್ಬಾಸ್ ಕಾರ್ಯಕ್ರಮದ ಆಯೋಜಕರಿಂದ ವಿಶೇಷ ಆಹ್ವಾನಿತರಾಗಿ ಆಹ್ವಾನ ಬಂದರೆ ನಾಲ್ಕೈದು ದಿನಗಳ ಮಟ್ಟಿಗೆ ಬಿಗ್ಬಾಸ್ ಮನೆಗೆ ಸ್ಪೆಷಲ್ ಗೆಸ್ಟ್ ರೀತಿ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಸೀಸನ್ 6ರ ವೇಳೆ ಪರಮೇಶ್ವರ್ ಗುಂಡ್ಕಲ್ ಬಿಗ್ಬಾಸ್ ಗೆ ಆಹ್ವಾನಿಸಿದ್ದರು. ಆದರೆ ಆಗ ಅನಾರೋಗ್ಯದ ಕಾರಣದಿಂದ ಹೋಗಲು ಆಗಲಿಲ್ಲ. ಬಿಗ್ಬಾಸ್ ಮನೆಗೆ ಹೋದರೆ ರಾಜಕಾರಣದ ಸ್ಪಾರ್ಕ್ ಹೊತ್ತಿಸುತ್ತೇನೆ. ರಾಜಕಾರಣದ ಜನಶಿಕ್ಷಣ ಕೊಡುತ್ತೇನೆ. ಅವಕಾಶ ಸಿಕ್ಕಿದರೆ ಖಂಡಿತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.