– ಅಳಿಯನ ಮನೆಯಿಂದ ನಿರಂತರ ಒತ್ತಡ
– ಒತ್ತಡ ಸಹಿಸಲಾರದೆ ತಾಯಿ ಸೂಸೈಡ್
ಗಾಂಧಿನಗರ: ಹುಟ್ಟಿದ ಮಗು ಹೆಣ್ಣಾದರೆ ಆಕೆಯನ್ನು ಪ್ರೀತಿಯಿಂದ ಸಾಕಿ-ಸಲಹುವ ಹೆತ್ತವರು, ಒಳ್ಳೆಯ ಮನೆತನಕ್ಕೆ ಮದುವೆ ಮಾಡಿಕೊಡಬೇಕು, ಮಗಳು ಚೆನ್ನಾಗಿರಬೇಕು ಎಂದು ಆಶಿಸುತ್ತಾರೆ. ಅಂತೆಯೇ ಗುಜರಾತ್ ನಲ್ಲೂ ಕೂಡ ಪೋಷಕರು ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಆದರೆ ಆಕೆ ಮಾತ್ರ ಹೆತ್ತವರ ಮನೆಗೆ ವಾಪಸ್ಸಾಗಿದ್ದಾಳೆ. ಇದರಿಂದ ನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ವಿಲಕ್ಷಣ ಘಟನೆಯೊಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಅನಿತಾ ದೇವಸಿ(45) ಎಂದು ಗುರುತಿಸಲಾಗಿದೆ. ವಡೋದರದ ಲಖಿಂಪುರ ರಸ್ತೆಯ ನಿವಾಸಿಯಾಗಿರುವ ಈಕೆ ಬುಧವಾರ ಮಧ್ಯಾಹ್ನ ಮನೆಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ವೇಲೆ ಮನೆಯಲ್ಲಿ ಎಲ್ಲರೂ ಮಲಗಿದ್ದನ್ನೇ ಉಪಯೋಗಿಸಿಕೊಂಡ ಮಹಿಳೆ ನೇರವಾಗಿ ಮನೆಯ ಟೆರೇಸ್ ಗೆ ತೆರಳಿ ಅಲ್ಲಿಂದ ಹಾರಿದ್ದಾರೆ.
ಮಗಳಿಗೆ ಮನವರಿಕೆ ಮಾಡಿದ್ರೂ ವಿಫಲ:
ದೇವಸಿಯ ಮಗಳನ್ನು ರಾಜಸ್ಥಾನದ ಪಲಿ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮಗಳು ಮಾತ್ರ ವಡೋದಲ್ಲಿರುವ ಹೆತ್ತವರ ಮನೆಗೆ ಬಂದವಳು ಮತ್ತೆ ಗಂಡನ ಮನೆಗೆ ತೆರಳಲು ಮನಸ್ಸು ಮಾಡಲಿಲ್ಲ. ಹೀಗಾಗಿ ದೇವಸಿ ಹಾಗೂ ಆಕೆಯ ಪತಿ ಮಗಳನ್ನು ಆಕೆಯ ಗಂಡನ ಮನೆಗೆ ತೆರಳುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಮಗಳು ಮಾತ್ರ ಯಾವುದೇ ಕಾರಣಕ್ಕೂ ತನ್ನ ಗಂಡನ ಮನೆಗೆ ತೆರಳುವ ಯೋಚನೆ ಮಾಡಲಿಲ್ಲ.
ಇತ್ತ ಅಳಿಯನ ಮನೆ ಕಡೆಯಿಂದಲೂ ನಿಮ್ಮ ಮಗಳನ್ನು ಕಳುಹಿಸಿಕೊಡಿ ಎಂದು ಒತ್ತಡ ಹಾಕಲು ಶುರು ಮಾಡಿದ್ದರು. ಆದರೆ ದೇವಸಿ ಮಾತ್ರ ಮಗಳನ್ನು ಆಕೆಯ ಗಂಡನ ಮನೆಗೆ ಕಳುಹಿಸಿಕೊಡುವಲ್ಲಿ ವಿಫಲರಾಗಿದ್ದರು.
ಮಗಳನ್ನು ಮನೆಗೆ ಕಳುಹಿಸಿಕೊಡಿ ಎಂದು ಅಳಿಯನ ಮನೆಯಿಂದ ಒತ್ತಡ ಹೇರಲಾಗುತ್ತಿತ್ತು. ಹಾಗೆಯೇ ಬುಧವಾರ ಕರೆ ಮಾಡಿದ್ದ ಅಳಿಯ, ನಿಮ್ಮ ಮಗಳನ್ನು ನಮ್ಮ ಮನೆಗೆ ಕಳುಹಿಸಿಕೊಡಿ ಎಂದು ಪೀಡಿಸಲು ಆರಂಭಿಸಿದ್ದಾನೆ. ಅಳಿಯನ ಮಾತುಗಳಿಂದ ದಂಪತಿ ಕಂಗಾಲಾಗಿದ್ದು, ದೇವಸಿ ಪತಿ ಅನಾರೋಗ್ಯಕ್ಕೆ ತುತ್ತಾದರು. ಕೂಡಲೇ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿದರು.
ಇತ್ತ ಮನೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಎಲ್ಲರೂ ನಿದ್ದೆಗೆ ಜಾರಿದ ಸಂದರ್ಭವನ್ನು ಉಪಯೋಗಿಸಿಕೊಂಡ ದೇವಸಿ ನೇರವಾಗಿ ಮನೆಯೆ ಟೆರೇಸ್ ಗೆ ತೆರಳಿ ಅಲ್ಲಿಂದ ಹಾರಿದ್ದಾರೆ. ಪರಿಣಾಮ ತಲೆಗೆ ಗಂಭೀರ ಏಟು ಬಿದ್ದಿದೆ. ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ. ಬಳಿಕ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.