– ಭಯದ ವಾತಾವರಣದಲ್ಲಿದ್ದಾರೆ ಎಷ್ಟೋ ಜನ
ನವದೆಹಲಿ: ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದು, ಬಿಜೆಪಿ ಸರ್ಕಾರಕ್ಕೆ ಹೆದರುವಂತಾಗಿದ ಎಂದು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.
ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮತನಾಡಿದ ನುಸ್ರತ್ ಜಹಾನ್, ಪಶ್ಚಿಮ ಬಂಗಳಾದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಗ್ನಿಮಿತ್ರಾ ಪೌಲ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಭಾಗಿಯಾಗಿದ್ದರು. ಈ ವೇಳೆ ಅಗ್ನಿಮಿತ್ರಾ ಮತ್ತು ನುಸ್ರತ್ ಜಹಾನ್ ನಡುವೆ ವಾಕ್ಸಮರವೇ ಏರ್ಪಟ್ಟಿತ್ತು.
ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮುಸ್ಲಿಮರಿಗೆ ಯಾವುದೇ ಸಹಾಯ ಮಾಡಿಲ್ಲ ಎಂದು ಅಗ್ನಿಮಿತ್ರಾ ಆರೋಪಿಸಿದರು. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ನುಸ್ರತ್ ಜಹಾನ್, ಈ ಹೇಳಿಕೆಗಳಿಗೆ ನನ್ನ ಸಂಪೂರ್ಣ ವಿರೋಧವಿದೆ. ಬಿಜೆಪಿ ಸರ್ಕಾರ ಬಂದ್ರೆ ತಮ್ಮ ಅವನತಿ ಎಂಬ ಭಯ ಅಲ್ಪಸಂಖ್ಯಾತರಲ್ಲಿ ಮನೆ ಮಾಡಿದೆ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಜೈ ಶ್ರೀರಾಮ ಘೋಷಣೆಯ ವಿಚಾರವೂ ಮುನ್ನಲೆಗೆ ಬಂದಿತ್ತು. ಜೈ ಶ್ರೀರಾಮ ಅನ್ನೋ ಘೋಷಣೆ ಸಮೃದ್ಧಿಯ ಪ್ರತೀಕವಾಗಿದ್ದು, ರಾಜಕೀಯ ಜಯಘೋಷ ಅಲ್ಲ. ಜನರು ಜೈ ಶ್ರೀರಾಮ, ಸೀತಾರಾಮ, ರಾಮ ರಾಮ ಪಠಿಸೋದು ಸಾಮಾನ್ಯ. ಮಮತಾ ಬ್ಯಾನರ್ಜಿ ಹಿಂದೂ ಆಗಿದ್ರೆ ಅವರಿಗೆ ಜೈ ಶ್ರೀರಾಮ ಘೋಷಣೆಯಿಂದ ಮುಜುಗರಕ್ಕೊಳಗಾಗಬೇಕು ಎಂದು ಅಗ್ನಿಮಿತ್ರಾ ಪೌಲ್ ಪ್ರಶ್ನಿಸಿದರು. ಹೀಗೆ ಸುಮಾರು ಸಮಯ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಇಬ್ಬರು ನಾಯಕಿಯರ ಮಧ್ಯೆ ಚರ್ಚೆ ನಡೆಯಿತು.