ಹಾಸನ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯನ್ನು ಕರೆದೊಯ್ಯಲು ಬಂದ ಅಂಬುಲೆನ್ಸ್ ಅರ್ಧದಲ್ಲೇ ಕೆಟ್ಟು ನಿಂತಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದುಮ್ಮಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ದುಮ್ಮಿಕೊಪ್ಪಲು ಗ್ರಾಮಕ್ಕೆ ಬೆಳಗ್ಗೆ 8 ಗಂಟೆಗೆ ಅಂಬುಲೆನ್ಸ್ ಬಂದಿದೆ. ಈ ವೇಳೆ ಅಂಬುಲೆನ್ಸ್ ಕೆಟ್ಟು ನಿಂತಿದ್ದು ಬದಲಿ ಅಂಬುಲೆನ್ಸ್ಗೆ ಕರೆ ಮಾಡಿದ್ದಾರೆ.
ಗಂಟೆಗಟ್ಟಲೆ ಕಾದರೂ ಕೂಡ ಬದಲಿ ಅಂಬುಲೆನ್ಸ್ ಬಂದಿಲ್ಲ. ಇದರಿಂದಾಗಿ ರೋಗಿ ಅಂಬುಲೆನ್ಸ್ಗಾಗಿ ರಸ್ತೆ ಬದಿಯಲ್ಲೇ ಮಲಗಿಕೊಂಡು ಕಾದು ಕುಳಿತಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಕೊರೊನಾ ಸಮಯದಲ್ಲಿ ಸರಿಯಾದ ಸೇವೆ ಒದಗಿಸದ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ಕೂಡ ಇಂತದ್ದೇ ಘಟನೆಯೊಂದು ನಡೆದಿದೆ. ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತುಮಕೂರು ರಸ್ತೆಯ ಫ್ಲೈಓವರ್ನಲ್ಲಿ ಕುಸಿದುಬಿದ್ದಿದ್ದಾರೆ. ಅವರಿಗೆ ಜ್ವರ ಇದ್ದಿದ್ದರಿಂದ ಯಾರೂ ರಕ್ಷಣೆ ಮಾಡಲು ಮುಂದಾಗಲಿಲ್ಲ. ಇತ್ತ ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೀಣ್ಯ ಪೊಲೀಸರು ರೋಗಿಯನ್ನು ರಕ್ಷಿಸಲು ಹರಸಾಹಸಪಟ್ಟರು. ಸ್ವತಃ ಪೊಲೀಸರೇ ಕರೆ ಮಾಡಿದರೂ ಅಂಬುಲೆನ್ಸ್ ಬರಲಿಲ್ಲ. ಹೀಗಾಗಿ ಪೊಲೀಸರೇ ತಮ್ಮ ಹೊಯ್ಸಳ ವಾಹನವನ್ನು ನಿಲ್ಲಿಸಿ ರೋಗಿಯನ್ನು ಕಾದ ಪ್ರಸಂಗ ನಡೆದಿದೆ.