ಚಿಕ್ಕಮಗಳೂರು: 30 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. 1998ರಲ್ಲಿ ಫಾರಂ 53ರಲ್ಲಿ ಅರ್ಜಿ ಹಾಕಿದ್ದೇವೆ. ಆದರೆ ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ನಮಗೆ ಉಳುಮೆ ಮಾಡಲು ಬಿಡುತ್ತಿಲ್ಲ ಎಂದು ರೈತನೋರ್ವ ಅರಣ್ಯ ಇಲಾಖೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ನಡೆದಿದೆ.
ಲಕ್ಕವಳ್ಳಿ ಸಮೀಪದ ಕುಂದೂರು ಗ್ರಾಮದ 50 ವರ್ಷದ ಮಾಗುಂಡ ಆತ್ಮಹತ್ಯೆಗೆ ಯತ್ನಿಸಿದ ರೈತ. ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ ಅರಣ್ಯ ಇಲಾಖೆ ಮುಂದೆಯ ವಿಷ ಸೇವಿಸಿ ಬಿದ್ದು ನರಳಾಡಿದ್ದಾರೆ. ಕೂಡಲೇ ಅಧಿಕಾರಿಗಳು ಹಾಗೂ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ರೈತ ಮಾಗುಂಡನನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
30 ವರ್ಷಗಳಿಂದ ನಾವು ಇಲ್ಲೇ ಉಳುಮೆ ಮಾಡಿ ಬದುಕುತ್ತಿದ್ದೇವೆ. ಇಲ್ಲಿ ಸುಮಾರು 18 ಎಕರೆ ಜಮೀನಿದ್ದು, ಎಲ್ಲರೂ ಒಂದೂವರೆ ಎರಡು ಎಕರೆ ಜಮೀನು ಉಳ್ಳವರಾಗಿದ್ದೇವೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಮಾಗುಂಡ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಆದರೆ ಅಧಿಕಾರಿಗಳು ನಮಗೆ ಉಳುಮೆ ಮಾಡಲು ಬಿಡುತ್ತಿಲ್ಲ. ಜಮೀನನ್ನು ಕಬಳಿಸಲು ಅಧಿಕಾರಿಗಳ ಮೇಲೆ ಸ್ಥಳೀಯರ ರಾಜಕೀಯ ಮುಖಂಡರ ಒತ್ತಡವಿದೆ ಎಂದು ಆರೋಪಿಸಿರೋ ಮಾಗುಂಡ ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸ್ಥಳೀಯವಾಗಿ ಸುತ್ತಮುತ್ತ ನೂರಾರು ಜನ ಸಾವಿರಾರು ಎಕರೆ ಒತ್ತುವರಿ ಮಾಡಿದ್ದಾರೆ. ಕೆಲವರು ಫಾರಂ 53ರಡಿ ಅರ್ಜಿ ಹಾಕಿದ್ದಾರೆ. ಆದರೆ ಅಧಿಕಾರಿಗಳು ನಮಗೆ ಮಾತ್ರ ಹಿಂಸೆ ಕೊಡುತ್ತಿದ್ದಾರೆ. ಬೇರೆ ಯಾರಿಗೂ ಏನನ್ನೂ ಕೇಳುತ್ತಿಲ್ಲ. ನಮಗೆ ಮಾತ್ರ ಈ ರೀತಿ ಮಾಡುತ್ತಿದ್ದಾರೆಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.