– ತಾಯಿ ಅಂತ್ಯಸಂಸ್ಕಾರಕ್ಕೆ ಹೋಗಲಾರದೆ ಮಗನ ಕಣ್ಣೀರು
ನವದೆಹಲಿ: ತಾಯಿಗಾಗಿ ಪುತ್ರನೊಬ್ಬ ಕೆಲಸ ತೊರೆದು ಇಂಡಿಯಾಗೆ ಬಂದಿದ್ದಾನೆ. ಆದರೆ ಆತ ಕ್ವಾರಂಟೈನ್ನಲ್ಲಿ ಇರುವಾಗಲೇ ಆತನ ತಾಯಿ ಸಾವನ್ನಪ್ಪಿದ್ದು, ಮಗ ತಾಯಿ ಅಂತ್ಯ ಸಂಸ್ಕಾರಕ್ಕೂ ಹೋಗದ ಪರಿಸ್ಥಿತಿ ಎದುರುರಾಗಿದೆ.
ಕೊರೊನಾ ಎಂಬ ಮಹಾಮಾರಿ ಸೃಷ್ಟಿಸುತ್ತಿರುವ ಅವಾಂತರಕ್ಕೆ ಗಡಿಯೇ ಇಲ್ಲ ಎಂಬಂತೆ ಆಗಿದೆ. ಒಂದು ಕಡೆ ಸೋಂಕಿನಿಂದ ಜನರು ಸಾಯುತ್ತಿದ್ದರೆ. ಒಂದು ಕಡೆ ಸಾವನ್ನಪ್ಪಿದವರನ್ನು ನೋಡಾದ ರೀತಿಯ ಪರಿಸ್ಥಿತಿ ಉಂಟಾಗಿದೆ. ಈಗ ದುಬೈನಿಂದ ಅಮ್ಮನಿಗಾಗಿ ಕೆಲಸ ಬಿಟ್ಟು ಬಂದು 30 ವರ್ಷದ ಅಮೀರ್ ಖಾನ್ ತನ್ನ ತಾಯಿಯ ಅಂತ್ಯಸಂಸ್ಕಾರಕ್ಕೂ ಕೊರೊನಾ ಕ್ವಾರಂಟೈನ್ ಅಡ್ಡಿಯಾಗಿದೆ.
ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅಮೀರ್ ತನ್ನ ತಾಯಿಯನ್ನು ನೋಡಬೇಕು ಎಂದು ಮೇ 13ರಂದು ಭಾರತಕ್ಕೆ ಬಂದಿದ್ದ. ಆದರೆ ಭಾರತ ಸರ್ಕಾರದ ನಿಯಮದ ಪ್ರಕಾರ ವಿದೇಶದಿಂದ ಬಂದವರು 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕು. ಈ ಕಾರಣದಿಂದ ದುಬೈನಿಂದ ದೆಹಲಿಗೆ ವಿಮಾನದಲ್ಲಿ ಬಂದ ಕೂಡಲೇ ಆತನನ್ನು ವಿಮಾನ ನಿಲ್ದಾಣದಲ್ಲೇ ತಡೆಹಿಡಿದು ಹೋಟೆಲ್ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಕಷ್ಟಪಟ್ಟು ದುಬೈನಿಂದ ಇಲ್ಲಿಗೆ ಬಂದಿದ್ದೇನೆ. ಇನ್ನೇನು 14 ದಿನ ಕಾಯ್ದರೇ ಸಾಕು ಅಮ್ಮನನ್ನು ನೋಡಬಹುದು ಎಂದು ಅಮೀರ್ ಕಾತುರದಿಂದ ಕಾಯುತ್ತಿದ್ದ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎನ್ನುವ ಹಾಗೇ ಕಳೆದ ಶನಿವಾರ ಅಮೀರ್ ತಾಯಿ ಉತ್ತರ ಪ್ರದೇಶದ ಅವರ ಗ್ರಾಮದಲ್ಲಿ ತೀರಿಕೊಂಡಿದ್ದಾರೆ. ತಾಯಿಯನ್ನು ನೋಡಬೇಕು ಎಂದು ಕೈತುಂಬ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಬಂದ ಮಗನಿಗೆ ತಾಯಿಯನ್ನು ನೋಡುವುದಿರಲಿ ಭಾನುವಾರ ನಡೆದ ಆಕೆಯ ಅಂತ್ಯಸಂಸ್ಕಾರದಲ್ಲೂ ಭಾಗವಹಿಸಲು ಸಾಧ್ಯವಾಗಿಲ್ಲ.
ಈ ವಿಚಾರವಾಗಿ ಕಣ್ಣೀರು ಹಾಕುತ್ತಾ ಮಾತನಾಡಿರುವ ಅಮೀರ್, ನಾನು ಊರಿಗೆ ಬಂದು ತಾಯಿಯನ್ನು ನೋಡಬೇಕು ಎಂಬ ಆಸೆಯಿಂದ ಕಳೆದ 2 ತಿಂಗಳಿನಿಂದ ದುಬೈನಲ್ಲಿರುವ ಭಾರತದ ರಾಯಭಾರ ಕಚೇರಿಗೆ ಅಲೆದು ಟಿಕೆಟ್ ಪಡೆದು ಇಂಡಿಯಾಗೆ ಬಂದೆ. ಆದರೆ ಇನ್ನೇನು ತಾಯಿಯನ್ನು ನೋಡಬೇಕು ಎನ್ನುವಷ್ಟರಲ್ಲಿ ನನ್ನ ತಾಯಿ ತೀರಿಕೊಂಡರು. ಅವರನ್ನು ನೋಡುವುದಿರಲಿ, ಕೊನೆಯ ಕಾಲದಲ್ಲಿ ಅವರ ಅಂತ್ಯಕ್ರಿಯೆಯಲ್ಲೂ ನನಗೆ ಭಾಗವಹಿಸಲು ಆಗಲಿಲ್ಲ ಎಂದು ಹೇಳಿದ್ದಾರೆ.
ನಾನು ಸರ್ಕಾರದ ನಿಯಮಗಳಿಗೆ ಬೆಲೆ ಕೊಡುತ್ತೇನೆ. ಪರೀಕ್ಷೆ ಕೂಡ ಮಾಡಿಸಿಕೊಳ್ಳುತ್ತೇನೆ. ಕೊನೆಯ ಬಾರಿಗೆ ನನ್ನ ತಾಯಿಯನ್ನು ನೋಡಲು ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳನ್ನು ಬೇಡಿಕೊಂಡೆ. ಆದರೆ ಅಧಿಕಾರಿಗಳು ಅದು ನಮ್ಮ ನಿಯಮಕ್ಕೆ ವಿರುದ್ಧ ಹಾಗಾಗಿ ನೀವು ಹೋಗಲು ಆಗುವುದಿಲ್ಲ ಎಂದು ಹೇಳಿದರು. ದುಬೈನಲ್ಲಿ 20 ದಿನಕ್ಕೂ ಹೆಚ್ಚಿನ ಕಾಲ ರಜೆ ಕೊಡಲ್ಲ ಎಂದು ಹೇಳಿದರು. ಅದರೂ ನಾನು ನನ್ನ ತಾಯಿ ಜೊತೆ ಕಾಲಕಳೆಯಲು ಕೆಲಸವನ್ನೇ ಬಿಟ್ಟು ಬಂದಿದ್ದೆ ಎಂದು ಅಮೀರ್ ತಿಳಿಸಿದ್ದಾರೆ.