ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸದ ಬೆನ್ನಲ್ಲೇ ರಾಜ್ಯ ಕೈ ನಾಯಕರಿಗೆ ಹೈಕಮಾಂಡ್ ಚಾಟಿ ಬೀಸಿದ್ದು, ರಾಜ್ಯ ಉಸ್ತುವಾರಿ ರಣ್ದೀಪ್ ಸುರ್ಜೆವಾಲ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
ಅಮಿತ್ ಶಾ ದಾಳಿಗೆ ಯಾಕೆ ರಾಜ್ಯ ನಾಯಕರು ಪ್ರತಿಕ್ರಿಯಿಸುತ್ತಿಲ್ಲ ಏಕೆ? ನಿಮ್ಮ ರಾಜ್ಯಕ್ಕೆ ಬಂದು ನಿಮಗೆ ಸವಾಲು ಹಾಕಿದ್ರೂ ಮೌನವೇಕೆ? ನಾನೇ ಟ್ವೀಟ್ ಮಾಡೋದಾದರೆ ನೀವೇನು ಮಾಡ್ತೀರಾ ಹೇಳಿ. ಇಂತಹ ಅವಕಾಶವನ್ನ ಬಳಸಿಕೊಳ್ಳದೇ ಸುಮ್ಮಿನಿದ್ದೀರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಖಡಕ್ ಸಂದೇಶ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಎರಡೂವರೆ ವರ್ಷ ನಾವೇ. ಅದರ ಮುಂದಿನ 5 ವರ್ಷವು ನಾವೇ ಅಂತ ಅಮಿತ್ ಶಾ ನಿನ್ನೆ ಹೇಳಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ ಅಂತ ಅಮಿತ್ ಶಾ ಕೈ ನಾಯಕರಿಗೆ ಟಾಂಗ್ ನೀಡಿದ್ದರು. ಹೊಂದಾಣಿಕೆ ರಾಜಕಾರಣಕ್ಕೆ ಮುಂದಾಗದೇ ನೇರವಾಗಿಯೇ ವಾಗ್ದಾಳಿ ನಡೆಸುವ ಕೆಲಸ ಆಗಬೇಕಿದೆ ಎಂದು ಸುರ್ಜೆವಾಲಾ ಸೂಚಿಸಿದ್ದಾರೆ ಎನ್ನಲಾಗಿದೆ.