ಕಾರವಾರ: ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಉತ್ತರ ಕನ್ನಡ ಜಿಲ್ಲೆಯ ಅಭಿಮಾನಿಯೊಬ್ಬರ ಮದುವೆಗೆ ಆಗಮಿಸಿ ಶುಭಕೋರಿದ್ದಾರೆ.
ಒಬ್ಬ ನಟ ಸ್ಟಾರ್ ಆಗಲು ಕಾರಣ ಪ್ರೇಕ್ಷಕರು. ಒಂದು ಸಿನಿಮಾ ಯಶಸ್ವಿಯಾಗಲು ಪ್ರೇಕ್ಷಕರೆ ಮುಖ್ಯ. ಸಿನಿಮಾ ಬಿಡುಗಡೆಯು ಒಬ್ಬ ನಟನು ಬರೆದಿರುವ ಪರೀಕ್ಷೆಯಂತೆ ಅದರ ಫಲಿತಾಂಶವನ್ನು ನೀಡುವವನು ಅಭಿಮಾನಿ. ಒಬ್ಬ ನಟನ ಯಶಸ್ಸಿಗೆ ಅಭಿಮಾನಿಯೇ ಅಡಿಪಾಯ. ಅಂತಹ ಅಭಿಮಾನಿಗಳನ್ನು ಎಷ್ಟೋ ಕಲಾವಿದರು ಸ್ಟಾರ್ ಆದ ನಂತರ ಮರೆತೆ ಬಿಡುತ್ತಾರೆ. ಹಾಗೂ ನಟನ ಜೊತೆಗೆ ಆಟೋಗ್ರಾಫ್ ಹಾಗೂ ಫೋಟೋ ತೆಗೆಸಿಕೊಳ್ಳುವುದು ಕಷ್ಟವಾಗಿ ಬಿಡುತ್ತದೆ. ಆದ್ರೆ ಅಭಿಮಾನಿಗಳನ್ನೇ ದೇವರು ಎಂದು ಹೇಳುವ ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ತಮ್ಮ ಬ್ಯುಸಿ ಶೆಡ್ಯೂಲ್ ಗಳ ಮಧ್ಯೆ ಬಿಡುವು ಮಾಡಿಕೊಂಡು ಅಭಿಮಾನಿಯ ಮದುವೆ ಸಮಾರಂಭಕ್ಕೆ ಹಾಜರಾಗುವ ಮೂಲಕ ಸರಳತೆ ಮೆರೆದಿದ್ದಾರೆ.
ಇಂದು ಉತ್ತರಕನ್ನಡ ಜಿಲ್ಲೆಯ ಕುಮಟ ಪಟ್ಟಣದ ದೇವರಹಕ್ಕಲ ಸಭಾ ಭವನದಲ್ಲಿ ನಡೆದ ಅಭಿಮಾನಿ ಗುರುರಾಜ ಎಂಬವರ ವಿವಾಹ ಮಹೋತ್ಸವಕ್ಕೆ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಗಮಿಸಿ ಶುಭಕೋರಿದ್ದಾರೆ. ಇನ್ನೂ ನೆಚ್ಚಿನ ನಟನನ್ನು ನೋಡಲು ನೂರಾರು ಜನರು ಮುಗಿಬಿದ್ದರು. ಅಭಿಮಾನಿಗಳಿಂದಾಗಿ ಕೆಲಕಾಲ ರಸ್ತೆ ಸಂಚಾರ ಸಹ ಸ್ತಬ್ದವಾಗಿತ್ತು.
ನಟ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಟೀಸರ್ನಲ್ಲಿಯೇ ಪುನೀತ್ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ನೀನಾದೆ ನಾ ಎಂಬ ಸಾಂಗ್ ಬಿಡುಗಡೆ ಮಾಡಿದ್ದು, ಹಾಡು ಯೂ ಟ್ಯೂಬ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ರಾಜಕುಮಾರ ಚಿತ್ರದ ನಂತರ ಮತ್ತೆ ನಿರ್ದೇಶಕ ಸಂತೋಷ್ ಆನಂದ್ರಾಮ್ ಪುನೀತ್ಗೆ ಆ್ಯಕ್ಷನ್ ಕಟ್ ಹೇಳಿದ್ದು, ಹೊಂಬಾಳೆ ಫಿಲ್ಮಂಸ್ ಬ್ಯಾನರ್ ನಡಿ ಚಿತ್ರ ಸೆಟ್ ಏರಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕೋವಿಡ್ ಸಮಯದಲ್ಲಿ ಜನರಿಗೆ ಆಹಾರ, ಮಾಸ್ಕ್, ಸ್ಯಾನಿಟೈಸರ್ ಹೀಗೆ ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚುವ ಮೂಲಕ ಎಷ್ಟೋ ಜನರನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಇತ್ತೀಚೆಗೆ ಸ್ಯಾಂಡಲ್ವುಡ್ ನಟರು ತಮ್ಮ ಸರಳತೆಯ ಮೂಲಕ ಜನರ ಮನ ಗೆಲ್ಲುತ್ತಿದ್ದಾರೆ ಎಂದರೆ ತಪ್ಪಾಗಲಾರದು.