– ಆತ್ಮಕ್ಕೆ ಶಾಂತಿ ಕೋರಿದ ಅಪ್ಪು
ಬೆಂಗಳೂರು: ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಕುಟುಂಬ ಭಾನುವಾರ ಅವನ ಫೋಟೋ ಇಟ್ಟುಕೊಂಡು, ಆತನ ಹೆಸರಲ್ಲಿ ಟಿಕೆಟ್ ಪಡೆದು ಸಿನಿಮಾ ನೋಡುವ ಮೂಲಕ ಗಮನ ಸೆಳೆದಿತ್ತು. ಇದಕ್ಕೆ ನಟ ಪುನೀತ್ ರಾಜ್ಕುಮಾರ್ ತುಂಬಾ ಭಾವುಕರಾಗಿದ್ದು, ಮನಸ್ಸು ಭಾರವಾಯಿತು ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪುನೀತ್ ರಾಜ್ಕುಮಾರ್, ಮೈಸೂರಿನ ಮುರಳಿಧರ್ ಹಾಗೂ ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಲುಗಳನ್ನು ಬರೆದಿದ್ದಾರೆ.
ಮೈಸೂರಿನ ಮುರಳಿಧರ್ ಹಾಗು ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ.
— Puneeth Rajkumar (@PuneethRajkumar) April 5, 2021
ಈ ಕುರಿತು ಪಬ್ಲಿಕ್ ಟಿವಿ ಜೊತೆ ಸಹ ಮಾತನಾಡಿದ ಪುನೀತ್ ರಾಜ್ಕುಮಾರ್, ಮನಸ್ಸಿಗೆ ತುಂಬಾ ಮುಟ್ಟಿತು, ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡಲಿ, ಬಾಲಕನ ಆತ್ಮಕ್ಕೆ ಶಾಂತಿ ಸಿಗಲಿ. ಆತನ ಫೋಟೋ ಜೊತೆಗೆ ಇಟ್ಟುಕೊಂಡು ಸಿನಿಮಾ ನೋಡಿದ್ದಾರೆ. ಇದಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಮೈಸೂರಿಗೆ ಬಂದಾಗ ಖಂಡಿತ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಪುನೀತ್ ರಾಜ್ಕುಮಾರ್ ಮುರಳಿಧರ್ ಅವರಿಗೆ ಭರವಸೆ ನೀಡಿದರು. ಹೀಗೆ ಹೇಳುತ್ತಿದ್ದಂತೆ ಮುರಳಿಧರ್ ಅವರು ಭಾವುಕರಾಗಿದ್ದು, ಸಿನಿಮಾ ನೋಡಿದ ತಕ್ಷಣವೇ ನನಗೆ ಶೇ.80ರಷ್ಟು ದುಃಖ ತೀರಿತು. ನಿಮ್ಮವರೆಗೆ ತಲುಪಬೇಕೆಂಬ ಆಸೆ ಇತ್ತು, ಅದೂ ಸಾಧ್ಯವಾಗಿದೆ. ನನ್ನ ಕೊನೆಯ ಆಸೆ ಅಂದುಕೊಳ್ಳಿ, ನನ್ನ ಮಗನ ಫೋಟೋವನ್ನು ಒಂದು ಬಾರಿ ಸ್ಪರ್ಶಿಸಿ ಎಂದು ಮನವಿ ಮಾಡಿದರು.
ನನ್ನ ಮಗ, ನಾನು ಹಾಗೂ ಕುಟುಂಬಸ್ಥರು ತುಂಬಾ ಅದೃಷ್ಟವಂತರು. ನನ್ನ ಮಗ ಪವರ್ ಆಫ್ ಯೂತ್ ಹಾಡು ಕೇಳುತ್ತಿದ್ದಾಗ ಏನೋ ಎನರ್ಜಿ ಕೊಡುತ್ತಿದೆಯಲ್ಲ ಎಂದು ನಾನು ಹಾಡು ಕೇಳುತ್ತಿದ್ದೆ. ಆ ಹಾಡು ತುಂಬಾ ಚೆನ್ನಾಗಿತ್ತು ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಮೈಸೂರಿನ ಮುರಳಿಧರ್ ಅವರ ಮಗ ಹರಿಕೃಷ್ಣನ್ ನಾಲ್ಕು ತಿಂಗಳ ಹಿಂದೆ ಅಕಾಲಿಕ ನಿಧನರಾದ್ದಾರೆ. ಹರಿಕೃಷ್ಣನ್ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಅಲ್ಲದೆ ಯುವರತ್ನ ಸಿನಿಮಾ ನೋಡಬೇಕೆಂದು ಮಹದಾಸೆಯಿಂದ ಕಾಯುತ್ತಿದ್ದ. ಆದರೆ ಯುವರತ್ನ ಸಿನಿಮಾ ರಿಲೀಸ್ಗೂ ಮುನ್ನ ಸಾವನಪ್ಪಿದ್ದಾರೆ. ಈಜಲು ಹೋಗಿ ನೀರಲ್ಲಿ ಮುಳುಗಿ ಮಗ ಹರಿಕೃಷ್ಣನ್ ಸಾವನ್ನಪ್ಪಿದ್ದು, ಮಗನ ಆಸೆ ಈಡೇರಿಸುವ ಉದ್ದೇಶದಿಂದ ಭಾನುವಾರ ಮಗನ ಫೋಟೋ ಇಟ್ಟುಕೊಂಡು ಕುಟುಂಬಸ್ಥರು ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಮೈಸೂರಿನ ಡಿಆರ್ ಸಿ ಮಲ್ಟಿಪ್ಲೆಕ್ಸ್ ನಲ್ಲಿ ತಂದೆ, ತಾಯಿ, ಯುವಕನ ಅಣ್ಣ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಾವನ್ನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಆ ಸೀಟ್ ನಲ್ಲಿ ಮಗನ ಫೋಟೋ ಇಟ್ಟುಕೊಂಡು ಚಲನಚಿತ್ರ ವೀಕ್ಷಿಸಿದರು.
ಈಜಲು ಹೋಗಿ ನೀರಲ್ಲಿ ಮುಳುಗಿ ನಾಲ್ಕು ತಿಂಗಳ ಹಿಂದಷ್ಟೇ ನನ್ನ ಮಗ ತೀರಿಕೊಂಡ. ಪುನೀತ್ ರಾಜ್ಕುಮಾರ್ ಅವರ ದೊಡ್ಡ ಫ್ಯಾನ್ ಆಗಿದ್ದ. ಪುನೀತ್ ಎಂದರೆ ಪ್ರಾಣ ಅವನಿಗೆ. ಇಂಧು ಸಿನಿಮಾ ನೋಡಲು ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಬರಲು ಇಷ್ಟವಿರಲಿಲ್ಲ. ಈಗಲೂ ನಮ್ಮ ಜೊತೆ ಇದ್ದಾನೆಂದು ನಮ್ಮ ಜೊತೆ ಕರೆದುಕೊಂಡು ಬಂದಿದ್ದೇವೆ. ಅವನಿಗೂ ಟಿಕೆಟ್ ತೆಗೆದುಕೊಂಡಿದ್ದೇವೆ. ಅವನೂ ನಮ್ಮ ಜೊತೆ ಸಿನಿಮಾ ನೋಡಿ ಸಂತೋಷ ಪಡಲೆಂದು ಜೊತೆಗೆ ಕರೆ ತಂದಿದ್ದೇವೆ ಎಂದು ಹೇಳಿ ಫೋಟೋ ತೋರಿಸಿ ತಂದೆ ಮುರುಳಿಧರ್ ಕಣ್ಣೀರು ಹಾಕಿದ್ದರು. ಈ ಸಂದೇಶ ಪುನೀತ್ ಅವರಿಗೆ ತಲುಪಲಿ ಎಂದು ಅವನನ್ನು ಚಿತ್ರ ಮಂದಿರಕ್ಕೆ ಕರೆ ತಂದಿದ್ದೇವೆ. ಅವನ ಆತ್ಮಕ್ಕೆ ಶಾಂತಿ ಸಿಗಲೆಂದು ಪುನೀತ್ ರಾಜ್ಕುಮಾರ್ ಅವರು ಹಾರೈಸಿದರೆ ಸಾಕು ಎಂದು ಮನವಿ ಮಾಡಿದ್ದರು. ಇದನ್ನು ಗಮನಿಸಿದ ಪುನೀತ್ ರಾಜ್ಕುಮಾರ್ ಇಂದು ಸ್ಪಂದಿಸಿದ್ದಾರೆ.