ಧಾರವಾಡ: ಅಪ್ರಾಪ್ತೆಯೊಬ್ಬಳ ಶವ ಆಕೆಯ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ 16 ವರ್ಷದ ಬಾಲಕಿ ಲಕ್ಷ್ಮೀ ಭಜಂತ್ರಿ ಮೃತ ಹುಡುಗಿ. ಅಪ್ರಾಪ್ತೆಯನ್ನು ಆಕೆಯ ಅತ್ತೆ ಮತ್ತು ಅತ್ತೆಯ ಮಗ ಕೊಲೆ ಮಾಡಿದ್ದಾರೆ ಅಂತ ಬಾಲಕಿಯ ಮನೆಯವರು ಆರೋಪ ಮಾಡಿದ್ದಾರೆ.
ಮಗಳನ್ನು ಮದುವೆ ಮಾಡಿಕೊಡುವಂತೆ ಅತ್ತೆಯ ಮಗ ಭೀಮಶಿ ತುಂಬಾಲು ಬಿದ್ದಿದ್ದ. ಆದರೆ ಭೀಮಶಿ ಸರಿ ಇಲ್ಲ. ಹೀಗಾಗಿ ನಾವು ಮದುವೆ ಮಾಡಿ ಕೊಡುವುದಿಲ್ಲ ಎಂದು ಹೇಳಿದ್ದೆವು ಅಂತ ಪೋಷಕರು ಹೇಳಿದರು.
ಆದರೆ ಇದರಿಂದ ರೋಸಿ ಹೋದ ಭೀಮಶಿ ಮೃತ ಲಕ್ಷ್ಮೀ ತಮ್ಮ ಗ್ರಾಮದ ಬಳಿ ಆಡು ಮೇಯಿಸಲು ಹೋದಾಗ ಅಲ್ಲಿಂದಲೇ ಅವಳನ್ನು ಕರೆದುಕೊಂಡು ನರೇಂದ್ರ ಗ್ರಾಮಕ್ಕೆ ಬಂದಿದ್ದನು. ಈ ಬಗ್ಗೆ ತಿಳಿದ ಪೋಷಕರು ಮುಂದೆ ಆಕೆಗೆ ಮದುವೆ ವಯಸ್ಸು ಆದ ಬಳಿಕ ನಿನಗೆ ಮದುವೆ ಮಾಡಿಕೊಡುತ್ತೀವಿ ಎಂದು ಲಕ್ಷ್ಮಿ ಮನೆಯವರು ಭೀಮಶಿಗೆ ಹೇಳಿದ್ದರು.
ಇಂದು ಏಕಾಏಕಿಯಾಗಿ ನರೇಂದ್ರ ಗ್ರಾಮದ ಅತ್ತೆ ಮನೆಯಲ್ಲೇ ಲಕ್ಷ್ಮೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೀಯ ಅತ್ತೆ ಶಾಂತಾ ಮತ್ತು ಭೀಮಶಿಯೇ ಕೊಲೆ ಮಾಡಿದ್ದಾರೆ ಅಂತ ಹುಡುಗಿಯ ಮನೆಯವರು ಮಹಿಳಾ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.