– ಯುವಕನ ಕಿರುಕುಳದಿಂದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
– ಕಾಲೇಜಿಗೆ ರಜೆ ಇದ್ರೂ ಬಿಡದ ಆರೋಪಿ
ಹೈದರಾಬಾದ್: ಯುವಕನ ಕಿರುಕುಳವನ್ನು ಸಹಿಸಲಾಗದೇ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ತಮ್ಮ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಅಮೀರ್ಪೇಟೆಯಲ್ಲಿ ನಡೆದಿದೆ.
ಅಶ್ವಿನಿ (22) ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿನಿ. ಮೃತ ಅಶ್ವಿನಿ ಅಮೀರ್ಪೇಟೆಯ ಶ್ರೀನಿವಾಸ್ನಗರ ಕಾಲೋನಿಯ ಅನುರಾಗ್ ಅಪಾರ್ಟ್ ಮೆಂಟ್ನಲ್ಲಿ ವಾಸಿಸುತ್ತಿದ್ದಳು. ಈಕೆ ತಂದೆ ಕಂಡಕ್ಟರ್ ಆಗಿದ್ದು, ಇವರಿಗೆ ಮೂವರು ಮಕ್ಕಳಿದ್ದರು. ಮೃತ ಅಶ್ವಿನಿ ಹಿರಿಯ ಮಗಳಾಗಿದ್ದು, ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಳು.
ಅದೇ ಪ್ರದೇಶದಲ್ಲಿ ಟಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಎಂಬಾತ ಅಶ್ವಿನಿ ಕಾಲೇಜಿಗೆ ಹೋಗುವಾಗ ಮತ್ತು ಬರುವಾಗು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದನು. ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತೆ ಎಂದು ಈ ವಿಚಾರವನ್ನು ಪೋಷಕರಿಗೆ ಅಶ್ವಿನಿ ತಿಳಿಸಿರಲಿಲ್ಲ. ಇತ್ತ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕಾಲೇಜುಗಳು ಮುಚ್ಚಿದ್ದವು. ಹೀಗಾಗಿ ಅಶ್ವಿನಿ ಸುಮಾರು ಎರಡೂವರೆ ತಿಂಗಳಿನಿಂದ ಮನೆಯಲ್ಲಿದ್ದಳು.
ಈ ವೇಳೆ ನವೀನ್ ವಿದ್ಯಾರ್ಥಿನಿಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದನು. ಇದರಿಂದ ನೊಂದ ಅಶ್ವಿನಿ ಓದುವುದಾಗಿ ಹೇಳಿ ರೂಮಿಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡಿದ್ದಾಳೆ. ಸ್ವಲ್ಪ ಸಮುಯದ ನಂತರ ತನ್ನ ತಂದೆಗೆ ಫೋನ್ ಮಾಡಿ, ಅಪಾರ್ಟ್ ಮೆಂಟ್ ಬಳಿಯ ಟಯರ್ ಅಂಗಡಿಯಲ್ಲಿ ಕೆಲಸ ಮಾಡುವ ನವೀನ್ ಕೆಲವು ದಿನಗಳಿಂದ ನನಗೆ ಕಿರುಕುಳ ಕೊಡುತ್ತಿದ್ದಾನೆ. ಆತನ ಕಿರುಕುಳವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದೇನೆ ಅಪ್ಪ ಎಂದು ತಿಳಿಸಿದ್ದಾಳೆ.
ತಕ್ಷಣ ಆಕೆಯ ತಂದೆ ಬಂದು ಬಾಗಿಲು ತೆರೆದು ನೋಡಿದ್ದಾರೆ. ಅಷ್ಟರಲ್ಲಿ ಅಶ್ವಿನಿ ವಿಷ ಸೇವಿಸಿದ್ದಳು. ನಂತರ ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಅಶ್ವಿನಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.
ಪೋಷಕರು ಆರೋಪಿ ನವೀನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನವೀನ್ಗಾಗಿ ಹುಡುಕಾಟ ಶುರು ಮಾಡಿದ್ದಾರೆ.