– ತಂದೆ ಸಾವಿನ ದುಃಖದಲ್ಲಿಯೂ ಬ್ಯಾಟ್ ಬೀಸಿದ್ದ ಆಟಗಾರ
ನವದೆಹಲಿ: ಶನಿವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೈದರಾಬಾದ್ ತಂಡವನ್ನು ಮಣಿಸಿತ್ತು. ಈ ಗೆಲುವನ್ನು ಮನ್ದೀಪ್ ಅವರು ವಿಧಿವಶರಾದ ತಂದೆಗೆ ಅರ್ಪಿಸಿದ್ದಾರೆ.
ಶನಿವಾರ ದುಬೈ ಮೈದಾನದಲ್ಲಿ ನಡೆದ ಐಪಿಎಲ್-2020ಯ 43ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಡಿದ ಪಂಜಾಬ್ ತಂಡ ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 126 ರನ್ ಸಿಡಿಸಿದ್ದರು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆದಿತ್ತು. ಆದರೆ ಕೊನೆಯಲ್ಲಿ ಪಂಜಾಬ್ ಬೌಲರ್ ಗಳು ಮಾಡಿದ ಮ್ಯಾಜಿಕ್ನಿಂದ ಆಲೌಟ್ ಆಗಿತ್ತು. ಈ ಮೂಲಕ ಪಂಜಾಬ್ 12 ರನ್ಗಳಿಂದ ಗೆದ್ದು ಬೀಗಿತ್ತು.
ಶನಿವಾರದ ಈ ಗೆಲುವಿನ ಮೂಲಕ ರಾಹುಲ್ ಪಡೆ ತನ್ನ ಪ್ಲೇ ಆಫ್ ಹಾದಿಯನ್ನು ಸುಗಮ ಮಾಡಿಕೊಂಡಿತ್ತು. ಬ್ಯಾಟಿಂಗ್ನಲ್ಲಿ ವಿಫಲವಾದರೂ ಸೂಪರ್ ಬೌಲಿಂಗ್ ಮಾಡಿ ಗೆದ್ದ ಪಂದ್ಯವನ್ನು ಪಂಜಾಬ್ ತಂಡ ಶುಕ್ರವಾರ ಮೃತರಾದ ಮನ್ದೀಪ್ ಸಿಂಗ್ ಅವರ ತಂದೆಯವರಿಗೆ ಅರ್ಪಣೆ ಮಾಡಿದೆ. ಈ ಪಂದ್ಯದ ನಂತರ ಟ್ವೀಟ್ ಮಾಡಿರುವ ಮನ್ದೀಪ್ ಅಪ್ಪ ಈ ಗೆಲುವು ನಿನಗಾಗಿ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
This one's for you Papa ???????? #SaddaPunjab pic.twitter.com/cmHUuHuhZ5
— Mandeep Singh (@mandeeps12) October 25, 2020
ತಂದೆಯ ಸಾವಿನ ಸುದ್ದಿಯ ನಂತರವೂ ಪಂದ್ಯವಾಡಿದ್ದ ಮನ್ದೀಪ್ ಸಿಂಗ್ ಅವರ ಮನೋಸ್ಥಿತಿಗೆ ಭಾರತೀಯರು ಫಿದಾ ಅಗಿದ್ದರು. ಕಳೆದ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದ ಮನ್ದೀಪ್ ಅವರು, 14 ಬಾಲಿಗೆ 17 ರನ್ ಹೊಡೆದಿದ್ದರು. ಕಳೆದ ಕೆಲ ದಿನಗಳಿಂದ ಮನ್ದೀಪ್ ತಂದೆ ಸರ್ದಾರ್ ಹರ್ದೇವ್ ಸಿಂಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಆದರೆ ಇತ್ತೀಚೆಗೆ ಅವರ ಆರೋಗ್ಯದ ಸ್ಥಿತಿ ತೀರ ಗಂಭೀರವಾದ ಕಾರಣ ಅವರನ್ನು ಚಂಡೀಗಢದ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಹರ್ದೇವ್ ಸಿಂಗ್ ಅವರು ನಿವೃತ್ತ ಜಿಲ್ಲಾ ಕ್ರೀಡಾ ಅಧಿಕಾರಿಯಾಗಿದ್ದರು.