ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಮಾದಾಪುರದ ಜನ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು, ಲಿಂಗಮುದ್ರೆ ಕಲ್ಲಿಗೆ ಗೋವು ಪ್ರತಿ ದಿನ ಎರಡು ಬಾರಿ ಹಾಲುಣಿಸುತ್ತಿದೆ. ನಿಯಮಿತವಾಗಿ ನಿತ್ಯ ಹಾಲುಣಿಸುವುದನ್ನು ಕಂಡು ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.
ಮನೆಯ ಕೊಟ್ಟಿಗೆಯಿಂದ ಬಿಟ್ಟ ತಕ್ಷಣ ಗ್ರಾಮದ ಪುಂಡಲೀಕ ಶೇಟ್ ಅವರಿಗೆ ಸೇರಿದ ಹಸು ನೇರವಾಗಿ ಜಮೀನಿನಲ್ಲಿರುವ ಲಿಂಗಮುದ್ರೆ ಕಲ್ಲಿನ ಬಳಿ ತೆರಳುತ್ತದೆ. ಬಳಿಕ ಲಿಂಗಮುದ್ರೆ ಕಲ್ಲಿಗೆ ತನ್ನ ಕೆಚ್ಚಲನ್ನು ತಾಗಿಸಿಕೊಂಡು ನಿಲ್ಲುತ್ತದೆ. ಈ ಮೂಲಕ ನಿಧಾನವಾಗಿ ಅದಕ್ಕೆ ಹಾಲು ಜಿನುಗುವಂತೆ ಮಾಡುತ್ತದೆ.
ಕಳೆದೆರಡು ತಿಂಗಳ ಹಿಂದೆ ಈ ಹಸುವಿನ ಕರು ಮೃತಪಟ್ಟಿದ್ದು, ಕರು ಮೃತಪಟ್ಟ ಒಂದು ತಿಂಗಳ ವರೆಗೆ ಹಸು ಮಾಲೀಕ ಹಾಲು ಹಿಂಡಿ, ಬಳಿಕ ನಿಲ್ಲಿಸಿದ್ದಾರೆ. ನಂತರ ಹಸು ಕೂಡ ಹಾಲು ಕೊಡುವುದನ್ನು ನಿಲ್ಲಿಸಿತ್ತು. ಕರು ಮೃತಪಟ್ಟಿರುವುದರಿಂದ ಹಸು ಹಾಲು ಕೊಡುತ್ತಿಲ್ಲ ಎಂದು ಮಾಲೀಕ ಪುಂಡಲೀಕ ಶೇಟ್ ಅಂದುಕೊಂಡಿದ್ದರು. ಕೆಲ ದಿನಗಳ ಬಳಿಕ ಪುಂಡಲೀಕ ಶೇಟ್ ಅಣ್ಣನ ಮಗ, ಹಸು ಜಮೀನಿಗೆ ತೆರಳಿ, ಜಮೀನಿನಲ್ಲಿದ್ದ ಲಿಂಗಮುದ್ರೆಗೆ ಹಾಲುಣಿಸುವುದನ್ನು ನೋಡಿದ್ದನಂತೆ. ಆದರೆ ಅಭಾಸವಾಗಬಾರದು ಎಂಬ ಉದ್ದೇಶದಿಂದ ಯಾರಿಗೂ ತಿಳಿಸದೇ ಸುಮ್ಮನಿದ್ದ ಪುಂಡಲೀಕ ಅಣ್ಣನ ಮಗ, ನಂತರ ತಮ್ಮ ಚಿಕ್ಕಪ್ಪನಿಗೆ ವಿಷಯ ತಿಳಿಸಿದ್ದಾರೆ.
ಈ ಹಸು ದಿನಕ್ಕೆ ಎರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಈ ರೀತಿ ವರ್ತಿಸುತ್ತಿದೆಯಂತೆ. ಇದೀಗ ಲಿಂಗಮುದ್ರೆ ಕಲ್ಲು ಹಾಗೂ ಗೋ ಮಾತೆ ಸಂಬಂಧವನ್ನು ಜನರು, ಕಾತುರದಿಂದ ವೀಕ್ಷಿಸುತ್ತಿದ್ದಾರೆ.