ಬೆಂಗಳೂರು: ಸೋಮವಾರದಿಂದ ಮೊದಲ ಹಂತದ ಅನ್ಲಾಕ್ ಪ್ರಾರಂಭವಾಗುತ್ತಿದೆ. ಇದೇ ಬೆನ್ನಲ್ಲೇ ನಿರ್ಭಂದಿತ ಅನ್ಲಾಕ್ ನಡುವೆ ಅಗತ್ಯ ಸೇವೆಗಳಿಗಾಗಿ ಲಿಮಿಟೆಡ್ ಬಿಎಂಟಿಸಿ ಬಸ್ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಲಾಗಿದೆ.
ಸೋಮವಾರದಿಂದ ಕೆಲ ಅಗತ್ಯ ಸೇವೆಗಳಿಗೆ ನಗರದ ಕೆಲ ಭಾಗಗಳಿಗೆ ಬಿಎಂಟಿಸಿ ಸಂಚಾರ ಆರಂಭಿಸಲಿದೆ. ಅಗತ್ಯ ಸೇವೆಯಲ್ಲಿ ಅಡಿಯಲ್ಲಿ ಬರುವ ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಸೇವೆಗಾಗಿ ಬಸ್ ಗಳು ಸಂಚಾರ ಮಾಡಲಿವೆ. ಸದ್ಯ ಮುಂದಿನ ಆದೇಶದವರೆಗೆ ಸಾರ್ವಜನಿಕರ ಸಂಚಾರಕ್ಕೆ ನಿರ್ಭಂದ ಮುಂದುವರಿದಿದೆ. ಅನ್ಲಾಕ್ ಸಂಚಾರಕ್ಕೆ ಜೂನ್ 14 ರಿಂದ ಜೂನ್ 21ರ ವರೆಗೆ ಜಾರಿಯಲ್ಲಿರುವಂತೆ ಬಿಎಂಟಿಸಿ ಹೊಸ ಮಾರ್ಗಸೂಚಿಯನ್ನ ಪ್ರಕಟಿಸಿದೆ.
ಯಾರಿಗೆಲ್ಲ ಅವಕಾಶ…?
ಅಗತ್ಯ ಸೇವೆಗೆ ಒಳಪಡುವ ಸರ್ಕಾರಿ, ಅರೆ ಸರ್ಕಾರಿ ಸಿಬ್ಬಂದಿಗಳಿಗೆ ಸಂಚರಿಸಲು ಅವಕಾಶ. ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ನರ್ಸ್ ಅಧಿಕಾರಿಗಳು, ನೌಕರರು, ವೈದ್ಯಕೀಯ ತಂತ್ರಜ್ಞರು, ಪ್ರಯೋಗಾಲಯ ಸಿಬ್ಬಂದಿಗಳಿಗೆ ಅವಕಾಶ ನೀಡಲಾಗಿದೆ. ಪ್ಯಾರಾಮೆಡಿಕಲ್ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಬಿಬಿಎಂಪಿ, ಬೆಸ್ಕಾಂ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಸಿಬ್ಬಂದಿ, ರೋಗಿಗಳು ಹಾಗೂ ಅವರ ಸಹಾಯಕರಿಗೆ ಸಂಚರಿಸಲು ಹೊಸ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇನ್ನೂ ಸಂಚಾರಕ್ಕೆ ಅವಕಾಶ ಇರುವವರು ಕೂಡ ಕಡ್ಡಾಯ ನಿಯಮ ಪಾಲನೆ ಮಾಡುವಂತೆ ಆದೇಶಿಸಲಾಗಿದೆ. ಬಸ್ ಚಾಲನಾ ಸಿಬ್ಬಂದಿಗಳಿಗೆ ಸಂಚಾರ ಮಾಡುವವರ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು. ಸದರಿ ಬಸ್ ಗಳಲ್ಲಿ ಅನುಮತಿಸಲಾದ ಪ್ರಯಾಣಿಕರು ಮಾತ್ರ ಬಸ್ ಗಳಲ್ಲಿ ಸಂಚಾರ ಮಾಡಬೇಕು. ಪಾಸು ಹೊಂದಿರದ ಪ್ರಯಾಣಿಕರೂ ಇ.ಟಿ.ಎಂ ಮೂಲಕ ಟಿಕೆಟ್ ಪಡೆಯಬೇಕು. ಬಸ್ಸಿನ ಒಟ್ಟು ಆಸನಗಳ ಸಾಮಥ್ರ್ಯದ ಶೇ .50 ರಷ್ಟು ಪ್ರಯಾಣಿಕರು ಮಾತ್ರ ಸಂಚಾರ ಮಾಡಬೇಕು. ನೆರೆ ಜಿಲ್ಲೆ / ಪ್ರದೇಶಗಳಿಗೆ ಸರ್ಕಾರ / ಜಿಲ್ಲಾಡಳಿತ ನೀಡುವ ನಿರ್ದೇಶನಗಳನ್ನು ಗಮನದಲ್ಲಿರಿಸಿಕೊಂಡು ಸಾರಿಗೆಗಳ ಕಾರ್ಯಾನಿರ್ವಹಿಸಬೇಕು. ಕರ್ತವ್ಯ ನಿರ್ವಹಿಸುವಾಗ ಚಾಲನಾ ಸಿಬ್ಬಂದಿ ಮಾಸ್ಕ್ ಕಡ್ಡಾಯವಾಗಿ ಧರಿಸುವುದು. ಇದನ್ನೂ ಓದಿ: ಜೂನ್ 14ರಿಂದ ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ – 11 ಜಿಲ್ಲೆಗಳು ಇನ್ನೊಂದು ವಾರ ಲಾಕ್
ಚಾಲನಾ ಸಿಬ್ಬಂದಿ ಸ್ಯಾನಿಟೈಸರ್ನ್ನು ಬಳಸಿ ಶುಚಿತ್ವವನ್ನು ಕಾಪಾಡುವುದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬಸ್ಸನ್ನು ಹತ್ತಲು ಇಳಿಯಲು ಚಾಲನಾ ಸಿಬ್ಬಂದಿ ಪ್ರಯಾಣಿಕರಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಮಾಸ್ಕ್ ಧರಿಸದ ಪ್ರಯಾಣಿಕರನ್ನು ಬಸ್ಸಿನಲ್ಲಿ ಪ್ರಯಾಣಿಸಲು ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು. ಸದರಿ ಮಾರ್ಗಗಳಲ್ಲಿ ಅಗತ್ಯ / ಆರೋಗ್ಯ ಸೇವೆ ಮಾರ್ಗಸಂಖ್ಯೆ ಹಾಗೂ ಬಸ್ಸು ತಲುಪುವ ಸ್ಥಳದ ಮಾರ್ಗಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸುವುದು. ಕೋವಿಡ್ -19 ಸೋಂಕು ನಿಯಂತ್ರಣಕ್ಕೆ ಸರ್ಕಾರವು ಸೂಚಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ಅನ್ಲಾಕ್ನಿಂದ ಸೋಂಕು ಹೆಚ್ಚಳ ಆದ್ರೆ ಕಠಿಣ ಕ್ರಮ: ಸುಧಾಕರ್