ರಾಯಚೂರು: ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಿರುವ ಜಿಲ್ಲೆಗಳಲ್ಲಿ ಸೋಮವಾರದಿಂದ ಲಾಕ್ಡೌನ್ ಸಡಿಲಿಕೆ ಘೋಷಣೆ ಮಾಡಿದ ಬೆನ್ನಲ್ಲೇ ಜಿಲ್ಲೆಯ ಮಸ್ಕಿ ಪಟ್ಟಣ ಸೇರಿದಂತೆ ವಿವಿಧೆಡೆಯಿಂದ ನೂರಾರು ವಾಹನಗಳಲ್ಲಿ ಜನ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಕೂಲಿ ಕಾರ್ಮಿಕರು, ಅನ್ಲಾಕ್ ಘೋಷಣೆ ಯಾಗುತ್ತಿದ್ದಂತೆ ಗಂಟು ಮೂಟೆ ಸಹಿತ ಮತ್ತೆ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ. ಅಡುಗೆ ಸಾಮಾನುಗಳು, ಬಟ್ಟೆ, ಬೈಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಕಟ್ಟಿಕೊಂಡು ಜನ ಗುಳೆ ಹೊರಟಿದ್ದಾರೆ.
ಮಸ್ಕಿ ಪಟ್ಟಣದಲ್ಲೇ ನೂರಾರು ಜನ ಸಾಲು ಸಾಲಾಗಿ ಟೆಂಪೋ ವಾಹನಗಳಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ. ಬೆಂಗಳೂರಲ್ಲಿ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಹಿನ್ನೆಲೆ ಅನ್ಲಾಕ್ ಆಗಿರುವುದರಿಂದ ಕೆಲಸಗಳು ಸಿಗುವ ಭರವಸೆಯಲ್ಲಿ ಜನ ಹೊರಟಿದ್ದಾರೆ. ಅಲ್ಲದೆ ಈಗಾಗಲೇ ಕಟ್ಟಡ ಕೆಲಸಗಳು ಆರಂಭಗೊಂಡಿರುವುದರಿಂದ ಗುತ್ತಿಗೆದಾರರು ಕೂಲಿಕಾರರನ್ನು ಕರೆಸಿಕೊಳ್ಳುತ್ತಿದ್ದಾರೆ.