ಬಳ್ಳಾರಿ: ಅನಾರೋಗ್ಯಕ್ಕೆ ತುತ್ತಾಗಿ ಮಡದಿ ಸಾವನ್ನಪ್ಪಿದ್ದರಿಂದ ಬೇಸತ್ತು ತಂದೆಯೊಬ್ಬ ತನ್ನಿಬ್ಬರ ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಘಟನೆ ಗಣಿನಗರಿ ಬಳ್ಳಾರಿಯಲ್ಲಿ ನಡೆದಿದೆ.
ಬೆಂಗಳೂರು ರಸ್ತೆಯಲ್ಲಿರುವ ಕಬರ್ಸ್ತಾನ್ ಎದುರಿನ ಪೆಟ್ರೋಲ್ ಬಂಕ್ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ಅಚಾರಿ, ಗುರುವಾರ ಮಧ್ಯಾಹ್ನ ಹಲಕುಂದಿಯಿಂದ ಹೆಚ್ಎಲ್ಸಿ ಉಪಕಾಲುವೆ ಬಳಿ ಹೋಗಿ ತನ್ನಿಬ್ಬರು ಮಕ್ಕಳು ಎಳೆದುಕೊಂಡು ಕಾಲುವೆ ಹಾರಿದ್ದಾರೆ.
ಗಣೇಶ್ ಆಚಾರಿಯವರ 12 ವರ್ಷದ ಮಗಳು ಸ್ಫೂರ್ತಿ ಕಾಲುವೆ ನೀರಿಗೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಆದರೆ 15 ವರ್ಷದ ಹಿರಿಯ ಮಗಳು ಕೀರ್ತನಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿರೋದನ್ನು ಗಮನಿಸಿದ ಗೃಹರಕ್ಷಕ ದಳದ ಸಿಬ್ಬಂದಿ ಸುದರ್ಶನ್ ಮತ್ತವರ ತಂಡ ಬಾಲಕಿಯನ್ನು ಜೀವಂತವಾಗಿ ರಕ್ಷಿಸಿ ಮಾನವೀಯತೆ ಮರೆದಿದ್ದಾರೆ. ಗಣೇಶ ಆಚಾರಿ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಜೀವಂತವಾಗಿ ಬದುಕುಳಿದ ಬಾಲಕಿ ಕೀರ್ತನಾರನ್ನು ಹಲಕುಂದಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಇರಿಸಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.