ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನ ರಕ್ಷಿಸಿದ ಪಬ್ಲಿಕ್ ಹೀರೋ ವಿಶು ಶೆಟ್ಟಿ

Public TV
1 Min Read
udp woman

– ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಮಗಳು

ಉಡುಪಿ: ನಗರದಲ್ಲಿ ಅನಾರೋಗ್ಯದಿಂದ ಅಸಹಾಯಕಳಾಗಿ ಒದ್ದಾಡುತ್ತಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಅನಾರೋಗ್ಯಪೀಡಿತ ತಾಯಿಯ ಹೊಟ್ಟೆಪಾಡಿಗೆ ಭಿಕ್ಷೆ ಬೇಡುತ್ತಿದ್ದ 9 ವರ್ಷದ ಮಗಳನ್ನು ಸಮಾಜಸೇವಕ ವಿಶು ಶೆಟ್ಟಿ ರಕ್ಷಿಸಿದ್ದಾರೆ.

ವಿಪರೀತ ಕಾಲು ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಹಾಗೂ ಮಗಳನ್ನು ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದ್ದಾರೆ. ಬಾಲಕಿಯನ್ನು ಈ ಹಿಂದೊಮ್ಮೆ ಬಾಲ ಮಂದಿರದ ಸುಪರ್ದಿಗೆ ಕೊಡಲಾಗಿತ್ತು. ಆಕೆ ಅಲ್ಲಿಂದ ಹೊರಬಂದು ಮತ್ತೆ ಭಿಕ್ಷಾಟನೆಯಲ್ಲಿ ತೊಡಗಿದ್ದಾಳೆ. ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ನಡೆ ವಿರುದ್ಧ ವಿಶು ಅಸಮಾಧಾನಗೊಂಡಿದ್ದಾರೆ

ಘಟನೆಯ ವಿವರ
ಬೆಳಗ್ಗೆ 11 ಗಂಟೆಯ ಸುಮಾರಿಗೆ ಉಡುಪಿಯ ಜೋಡುಕಟ್ಟೆಯ ಬಳಿ, ಈ ಹಿಂದೆ ಬಾಲಮಂದಿರದಲ್ಲಿ ಆಶ್ರಯ ಪಡೆಯುತ್ತಿದ್ದ ಬಾಲಕಿ ಬೇಡುತ್ತಿದ್ದಳು. ಪಬ್ಲಿಕ್ ಹೀರೋ ವಿಶು ಶೆಟ್ಟಿಯವರು ಬಾಲಕಿಯ ಬಳಿ ಹೋಗಿ ವಿಚಾರಿಸಿದ್ದಾರೆ. ತಾಯಿಯು ಅನಾರೋಗ್ಯದಿಂದಿದ್ದು ಇಬ್ಬರ ಹೊಟ್ಟೆಪಾಡಿಗಾಗಿ ಬೇಡುತ್ತಿರುವುದಾಗಿ ತಿಳಿಸಿದ್ದಾಳೆ. ತದನಂತರ ತಾಯಿಯನ್ನು ಹೋಗಿ ನೋಡಿದಾಗ ಆಕೆ ನೋವಿನಿಂದ ನಡೆಯಲಾಗದೆ ಕಿರುಚುತ್ತಿದ್ದಳು. ಆಕೆ ಗಂಡ ತೀರಿಕೊಡಿದ್ದು ತಂದೆ ತಾಯಿ ಯಾರು ಇಲ್ಲದೆ ಅರೋಗ್ಯ ಕೂಡ ತೀರಾ ಹದಗೆಟ್ಟು ಅಸಹಾಯಕಳಾಗಿದ್ದೇನೆ. ನನ್ನನ್ನು ಹಾಗೂ ಮಗಳನ್ನು ರಕ್ಷಿಸಿ ಎಂದು ಅಂಗಲಾಚಿದ್ದಾಳೆ.

ಕೂಡಲೇ ವಿಶು ಶೆಟ್ಟಿಯವರು ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಬಾಲಕಿಯನ್ನು ಪುನಃ ಬಾಲಮಂದಿರಕ್ಕೆ ದಾಖಲಿಸುವ ಮುಖಾಂತರ ಮುಂದೆ ಆಗಬಹುದಾದಂತಹ ಅನಾಹುತವನ್ನು ತಪ್ಪಿಸಿದಂತಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಮಾಜ ಸೇವಕ ವಿಶು ಶೆಟ್ಟಿ, ಬಾಲಕಿಯರ ಬಾಲ ಮಂದಿರದಲ್ಲಿ ಆಶ್ರಯ ಪಡೆಯುತ್ತಿದ್ದ ಬಾಲಕಿ ಪುನಃ ಬೀದಿಗೆ ಬಿದ್ದಿದ್ದು ಹೇಗೆ? ಇಲಾಖೆಯ ಸುಪರ್ದಿಯಿಂದ ಬಾಲಕಿ ಪುನಃ ಬೀದಿಗೆ ಬಿದ್ದ ಬಗ್ಗೆ ವಿಶು ಶೆಟ್ಟಿಯವರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶು ಶೆಟ್ಟಿಯವರು ರಕ್ಷಿಸಿ ಇಲಾಖೆಯ ಸುಪರ್ದಿಗೆ ಒಪ್ಪಿಸಿದ ಬಾಲಕಿಯರು ಪುನಃ ಬೀದಿಯಲ್ಲಿ ಭಿಕ್ಷಾಟನೆಗೆ ಇಳಿದಿದ್ದು ಮೂರನೇ ಪ್ರಕರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *