ಅನಧಿಕೃತ ಧಾರ್ಮಿಕ ಕಟ್ಟಡಗಳ ವರದಿ ನೀಡಿ: ಬಿಬಿಎಂಪಿ ಆಯುಕ್ತರ ಖಡಕ್ ಆದೇಶ

Public TV
3 Min Read
BBMP MEETING 4

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸುವ ಸಂಬಂಧ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ರವರು ಪಾಲಿಕೆ ಕೇಂದ್ರ ಕಚೇರಿ ವಾರ್ ರೂಂ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಬಿಬಿಎಂಪಿ ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಆಟದ ಮೈದಾನ, ಸರ್ಕಾರಿ ಜಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಿರುವ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಧಾರ್ಮಿಕ ಕಟ್ಟಡಗಳನ್ನು 3 ದಿನಗಳಲ್ಲಿ ಸಮೀಕ್ಷೆ ಮಾಡಿ ಸಮಗ್ರ ವರದಿ ನೀಡಬೇಕೆಂದು ಆಯುಕ್ತರು ಎಲ್ಲಾ ಆಧಿಕಾರಿಗಳಿಗೆ ಸೂಚನೆ ನೀಡಿದರು.

BBMP MEETING 1

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ 2009ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ದಾಖಲಿಸಲಾಗಿದ್ದು, ಇದು ಕೇವಲ ಬಿಬಿಎಂಪಿಗೆ ಮಾತ್ರವಲ್ಲದೆ ದೇಶಕ್ಕೆ ಅನ್ವಯವಾಗಲಿದೆ. ಈ ಪೈಕಿ 29 ಸೆಪ್ಟೆಂಬರ್ 2009ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಬೇಕೆಂಬ ಆದೇಶವಾಗಿದೆ. ಈ ಆದೇಶದಲ್ಲಿ 2009ರ ಮುನ್ನ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಬೇರೆಡೆ ಸ್ಥಳಾಂತರ/ತೆರವುಗೊಳಿಸುವ ಕಾರ್ಯ ಮಾಡಬೇಕು. 29 ಸೆಪ್ಟೆಂಬರ್ 2009ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂಬ ಆದೇಶವಿದೆ ಎಂದು ತಿಳಿಸಿದರು.

BBMP MEETING 3

ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿರುತ್ತದೆ. ಈ ಪೈಕಿ ಖಾಸಗಿ ಜಾಗದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ಹೊರತುಪಡಿಸಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಈ ಸಂಬಂಧ 2009ರ ಮುನ್ನ ಹಾಗೂ 2009ರ ನಂತರ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ಎಲ್ಲಾ ವಾರ್ಡ್ ಇಂಜಿನಿಯರ್ ಹಾಗೂ ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ನಡೆಸಿ 3 ದಿನಗಳಲ್ಲಿ ನಿಖರವಾದ ಪಟ್ಟಿಯನ್ನು ಸಿದ್ಧಪಡಿಸಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.

BBMP MEETING 2

ಇದೇ ಜನವರಿ 28ರಂದು ಧಾರ್ಮಿಕ ಕಟ್ಟಡಗಳ ವಿಚಾರವಾಗಿ ಹೈಕೋರ್ಟ್ ನಲ್ಲಿ ವಿಚಾರಣೆಯಿದ್ದು, ಈ ವಿಚಾರಣೆಯಲ್ಲಿ ನಿಖರವಾದ ಮಾಹಿತಿ ನೀಡಬೇಕು. ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಸಮೀಕ್ಷೆಯು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಆದ್ದರಿಂದ ಯಾವ ಅಧಿಕಾರಿಯೂ ಇದನ್ನು ಕಡೆಗಣಿಸುವಂತಿಲ್ಲ. ಪಾಲಿಕೆಯ ಎಲ್ಲಾ 8 ವಲಯಗಳ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಮಾಡಿ ವರದಿ ನೀಡಬೇಕು. ಜೊತೆಗೆ 2009ರ ನಂತರ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳಿಗೆ 27ರೊಳಗೆ ನೋಟೀಸ್ ಜಾರಿ ಮಾಡಿ ಧಾರ್ಮಿಕ ಕಟ್ಟಡಗಳು ನಿರ್ಮಿಸಿರುವವರಿಂದ 1 ವಾರದಲ್ಲಿ ಆ ಬಗ್ಗೆ ಸಮಜಾಯಿಷಿ ಪಡೆಯಬೇಕು ಎಂದು ಸೂಚನೆ ನೀಡಿದರು.

BBMP Commissioner Manjunath Prasad

ಧಾರ್ಮಿಕ ಕಟ್ಟಡಗಳ ಸಮೀಕ್ಷೆಯನ್ನು ಎಲ್ಲಾ ಅಧಿಕಾರಿಗಳು ಒಂದೇ ಮಾದರಿಯಲ್ಲಿ ಮಾಡಬೇಕು. ವಲಯದ ಹೆಸರು, ದೇವಸ್ಥಾನ/ಚರ್ಚ್/ಮಸೀದಿ/ಗುರುದ್ವಾರದ ಹೆಸರು, ಯಾವ ವಾರ್ಡ್ ಮತ್ತು ವಾರ್ಡ್ ಸಂಖ್ಯೆ, ವಿಳಾಸ, ಧಾರ್ಮಿಕ ಕಟ್ಟಡಗಳನ್ನು 2009ರ ಮುನ್ನ ಹಾಗೂ 2009ರ ನಂತರ ನಿರ್ಮಾಣ ಮಾಡಿರುವ ಬಗ್ಗೆ ಹಾಗೂ ಎಷ್ಟು ಅಳತೆಯಲ್ಲಿ ದೇವಸ್ಥಾನವಿದೆ ಎಂಬ ಜಾಗದ ಅಂದಾಜು ಮಾಹಿತಿಯನ್ನು ನೀಡಬೇಕು.

BBMP

ಈ ಸಂಬಂಧ ಒಂದು ಫಾರ್ಮೆಟ್ ನೀಡಲಾಗುತ್ತದೆ ಅದರಂತೆ ಸಮೀಕ್ಷೆ ನಡೆಸಿ ಸಮಗ್ರ ಮಾಹಿತಿಯನ್ನು ತ್ವರಿತವಾಗಿ ಸಿದ್ಧಪಡಿಸಿಕೊಡಿ ಎಂದು ತಿಳಿಸಿದ ಆಯುಕ್ತರು, ಪಟ್ಟಿಮಾಡಿರುವ ಧಾರ್ಮಿಕ ಕಟ್ಟಡಗಳ ಛಾಯಾಚಿತ್ರಗಳನ್ನು ಕೂಡಾ ವರದಿಯಲ್ಲಿ ಲಗತ್ತಿಸಿರಬೇಕು. ಹೈಕೋರ್ಟ್ ಗೆ ವರದಿ ಸಲ್ಲಿಸಿದ ನಂತರ ಪೊಲೀಸ್ ಇಲಾಖೆಯ ಭ್ರದತೆಯೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

BBMP Commissioner Manjunath Prasad

ಈ ವೇಳೆ ವಿಶೇಷ ಆಯುಕ್ತರುಗಳಾದ ಜೆ.ಮಂಜುನಾಥ್, ಬಸವರಾಜ್, ರಾಜೇಂದ್ರ ಚೋಳನ್, ರವೀಂದ್ರ, ತುಳಸಿ ಮದ್ದಿನೇನಿ ಉಪಸ್ಥಿತರಿದ್ದರು. ಹಾಗೂ ಎಲ್ಲಾ ವಲಯಗಳ ಜಂಟಿ ಆಯುಕ್ತರುಗಳು, ಮುಖ್ಯ ಇಂಜಿನಿಯರ್ ಗಳು, ಕಾರ್ಯಪಾಲಕ ಇಂಜಿನಿಯರ್ ಗಳು, ಸಹಾಯಕ ಕಾರ್ಯಪಾಲಕ/ಸಹಾಯಕ ಇಂಜಿನಿಯರ್ ಗಳು, ಕಂದಾಯ ಅಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *