ಹಾವೇರಿ: ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ರಣಕೇಕೆ ಹಾಕುತ್ತಿದ್ದು, ಸರ್ಕಾರ ಸಹ ಸೋಂಕು ತಡೆಗೆ ಲಾಕ್ಡೌನ್ ವಿಸ್ತರಿಸುತ್ತಲೇ ಇದೆ. ಆದರೂ ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ, ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಹೀಗೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದವರಿಗೆ ಮಹಿಳಾ ಎಎಸ್ಐ ಬಸ್ಕಿ ಹೊಡೆಸಿ ಪಾಠ ಕಲಿಸಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆಯವರೆಗೆ ಅವಕಾಶ ನೀಡಿದೆ. ಅದರೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಲಾಕ್ಡೌನ್ ಇದ್ದರೂ ಅನಗತ್ಯವಾಗಿ ಹೊರಗೆ ಓಡಾಡ್ತಿದ್ದವರಿಗೆ ಮಹಿಳಾ ಎಎಸ್ಐ ಬಸ್ಕಿ ಹೊಡೆಸಿ ಪಾಠ ಕಲಿಸಿದ್ದಾರೆ.
ಚಿಕ್ಕೇರೂರು ಗ್ರಾಮದಲ್ಲಿ ಅನಗತ್ಯವಾಗಿ ಹೊರಗೆ ಓಡಾಡುತ್ತಿದ್ದವರನ್ನು ತಡೆದು ಕಿವಿ ಹಿಡಿಸಿ ಇಪ್ಪತ್ತೈದು ಬಸ್ಕಿ ಹೊಡೆಸಿ ಹಂಸಭಾವಿ ಮಹಿಳಾ ಎಎಸ್ಐ ಎಂ.ಎ.ಅಸಾದಿ ಶಿಕ್ಷೆ ನೀಡಿದ್ದಾರೆ. ಈ ಮೂಲಕ ಅನಗತ್ಯವಾಗಿ ಓಡಾಡುವ ಜನರಿಗೆ ತಕ್ಕ ಪಾಠ ಕಲಿಸಿದ್ದಾರೆ.
ಚಿಕ್ಕೇರೂರು ಗ್ರಾಮದಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡುತ್ತಿದ್ದಾರೆ. ಆಸ್ಪತ್ರೆ, ಮೆಡಿಕಲ್ ಶಾಪ್ ಹಾಗೂ ರೈತರು ಜಮೀನಿಗೆ ಹೋಗಲು ಮಾತ್ರ ಬಿಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವ ಜನರಿಗೆ ಬಸ್ಕಿ ಹೊಡೆಸಿ, ಬುದ್ಧಿವಾದ ಹೇಳಿ ಮನೆಗೆ ಕಳಿಸುತ್ತಿದ್ದಾರೆ. ಇನ್ನು ಕೆಲವು ವಾಹನ ಸವಾರರಿಗೆ ನೂರು ದಂಡ ಹಾಕುತ್ತಿದ್ದಾರೆ. ಅಲ್ಲದೆ ಕೆಲ ವಾಹನಗಳನ್ನು ಸೀಜ್ ಸಹ ಮಾಡಿದ್ದಾರೆ.